ಚಿಕ್ಕಮಗಳೂರು:ನಗರದಲ್ಲಿ ದತ್ತ ಮಾಲಾ ಉತ್ಸವವನ್ನು ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ತುಂಬಾ ಅದ್ಧೂರಿಯಾಗಿ ಆಚರಣೆ ಮಾಡುತ್ತಿವೆ.
ಈ ಹಿನ್ನೆಲೆ ನಗರದ ನಾರಾಯಣಪುರ ಬಡಾವಣೆಯಲ್ಲಿ ಸಚಿವ ಸಿ.ಟಿ. ರವಿ ಹಾಗೂ ಇತರ ಭಕ್ತರು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿದರು. ದತ್ತಾತ್ರೇಯ ಸ್ವಾಮಿಗೆ ಅಕ್ಕಿ, ಬೆಲ್ಲ, ಕಾಯಿ ತುಂಬಾ ಪ್ರಿಯವಾದ ಆಹಾರವಾದ ಕಾರಣ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಪಡಿ ಸಂಗ್ರಹ ಮಾಡಿದರು. ಪಡಿ ಸಂಗ್ರಹದ ನಂತರ ಮಾತನಾಡಿದ ಸಚಿವ ಸಿ.ಟಿ. ರವಿ ಬಹಳ ವರ್ಷಗಳ ಪರಿಶ್ರಮ ಮತ್ತು ಸಂಕಲ್ಪದ ಆಂದೋಲನದ ಮೂಲಕ ಅಯೋಧ್ಯೆಯ ರೀತಿಯಲ್ಲಿ ದತ್ತ ಪೀಠ ಗುರಿ ಮುಟ್ಟುತ್ತೆ. ಈ ಬಾರಿ ಸಂಕಲ್ಪ ಮಾಡಿ ಭಕ್ತಿ ಹಾಗೂ ಭಾವದೊಂದಿಗೆ ದತ್ತ ಪೀಠಕೆ ಹೋಗುತ್ತೇವೆ. ಜೆಡಿಎಸ್ ಮುಖಂಡ ದೇವರಾಜ್ ಅವರು ಹಿಂದೂ ಅರ್ಚಕರ ನೇಮಕದ ಬಗ್ಗೆ ಹೇಳಿರೋದನ್ನ ಸ್ವಾಗತ ಮಾಡುತ್ತೇನೆ ಎಂದರು.
ದತ್ತನಿಗೆ ಜಾತಿ ಭೇದ ಇಲ್ಲ. ಹಿಂದೂ ಅರ್ಚಕರು ನೇಮಕ ಆಗಬೇಕು ಎಂಬುದು ನಮ್ಮ ಬೇಡಿಕೆ. ಯಾರೇ ಹಿಂದೂ ಅರ್ಚಕರು ಆದರೂ ಒಳ್ಳೆಯದು ಎಂದು ಹೇಳಿದರು. ಕೆಲವರು ಇದನ್ನು ರಾಜಕೀಯ ಕೇಂದ್ರಿತ ಎಂದೂ ಹೇಳುತ್ತಿದ್ದಾರೆ. ನಾನು ಹೋರಾಟ ಪ್ರಾರಂಭ ಮಾಡಿದಾಗ ಯಾವುದೇ ಪಕ್ಷದಿಂದ ಇರಲಿಲ್ಲ. ಕಾಲೇಜು ವಿದ್ಯಾರ್ಥಿಯಾಗಿ ಹೋರಾಟ ಮಾಡಿದ್ದೆ ಇಲ್ಲಿ ನಾನು ರಾಜಕೀಯ ದುರ್ಬಳಕೆ ಮಾಡಿಕೊಂಡಿಲ್ಲ ಎಂದೂ ಹೇಳಿದರು.
ಮನೆ ಮನೆಗೆ ತೆರಳಿ ಸಂಗ್ರಹಿಸಿದ ಅಕ್ಕಿ, ಬೆಲ್ಲ, ಕಾಯಿಯ ಪಡಿಯನ್ನು ನಾಳೆ ದತ್ತ ಪೀಠದಲ್ಲಿರುವ ಸೀತಾಳಯ್ಯನ ಗಿರಿ, ಫಲಹಾರ ಮಠ, ನಿರ್ವಾಣ ಸ್ವಾಮಿ ಮಠ ಅಥವಾ ದತ್ತ ಪೀಠದ ಯಾವುದಾದರೂ ಮಠದಲ್ಲಿ ಪಡಿ ಸಲ್ಲಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹಲವಾರು ಭಕ್ತಾದಿಗಳು ಭಾಗವಹಿಸಿ ಪಡಿಯನ್ನು ಸಂಗ್ರಹಿಸಿದಲ್ಲದೇ ನಗರದ ಹಲವಾರು ಭಾಗಗಲ್ಲಿ ದತ್ತ ಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುವ ಸಂಪ್ರದಾಯ ರೂಢಿಯಲ್ಲಿದೆ.
ಒಟ್ಟಾರೆ ದತ್ತಮಾಲ ಉತ್ಸವ ಹಿನ್ನೆಲೆ ಸಚಿವ ಸಿ.ಟಿ. ರವಿ ಸೇರಿದಂತೆ ವಿವಿಧ ಭಾಗಗಳಲ್ಲಿ ದತ್ತಮಾಲಾಧಾರಿಗಳು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಅಕ್ಕಿ, ಬೆಲ್ಲ ಸಂಗ್ರಹ ಮಾಡಿದರು. ಇಂದು ಮಧ್ಯಾಹ್ನ 4 ಗಂಟೆಯ ನಂತರ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.