ಚಿಕ್ಕಮಗಳೂರು:ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಹಮ್ಮಿಕೊಂಡಿರುವ ದತ್ತ ಜಯಂತಿ ಉತ್ಸವಕ್ಕೆ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ನೂರಾರು ದತ್ತ ಭಕ್ತರು ಮಾಲಧಾರಣೆ ಮಾಡುವುದರ ಮೂಲಕ ಚಾಲನೆ ನೀಡಿದರು.
ದತ್ತ ಜಯಂತಿ ಉತ್ಸವಕ್ಕೆ ಚಾಲನೆ: ಚಿಕ್ಕಮಗಳೂರಲ್ಲಿ ಸಚಿವ ಸಿ.ಟಿ.ರವಿ ಮಾಲಧಾರಣೆ - Datta Jayanthi Utsav Begins at Chikkamagaluru
ಚಿಕ್ಕಮಗಳೂರಿನಲ್ಲಿ ದತ್ತ ಮಾಲಧಾರಣೆಗೆ ಚಾಲನೆ ದೊರೆತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಚಿಕ್ಕಬಳ್ಳಾಪುರ ಚುನಾವಣೆ ಪ್ರಚಾರದಲ್ಲಿರುವುದರಿಂದ ಅಲ್ಲಿಯೇ ವಿಶೇಷ ಪೂಜೆ ನೆರವೇರಿಸಿ ದತ್ತ ಮಾಲೆ ಧರಿಸಿದರು.
ಚಿಕ್ಕಮಗಳೂರು ಶಾಸಕ ಹಾಗೂ ಸಚಿವ ಸಿ.ಟಿ. ರವಿ ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರದಲ್ಲಿರುವ ಕಾರಣ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ಭೋಗ ನಂದೀಶ್ವರ ದೇವಸ್ಥಾನದಲ್ಲಿಯೇ ವಿಶೇಷ ಪೂಜೆ ಸಲ್ಲಿಸಿ ದತ್ತಾ ಮಾಲಧಾರಣೆ ಮಾಡಿದ್ದಾರೆ.
ಬಳಿಕ ಮಾತನಾಡಿ, ಪ್ರತಿವರ್ಷದಂತೆ ನಾನು ದತ್ತ ಮಾಲೆ ಧರಿಸಿ ವ್ರತಾಚರಣೆ ಮಾಡಿ ದತ್ತ ಪೀಠಕ್ಕೆ ಹೋಗುತ್ತಿದ್ದೆ. ಆದರೆ ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ಇರುವ ಕಾರಣ ಇಲ್ಲಿಯೇ ಮಾಲಧಾರಣೆ ಮಾಡಿದ್ದೇನೆ. ಈ ಭಾರಿ ದತ್ತ ಪೀಠದಲ್ಲಿ ದತ್ತಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದತ್ತ ಜಯಂತಿಗೆ ವ್ರತಧಾರಿಗಳಾಗಿ ಹಾಗೂ ಸಂಕಲ್ವಿತರಾಗಿ ಭಕ್ತರು ಆಗಮಿಸಬೇಕು. ದತ್ತ ಜಯಂತಿ ನಂತರ ಉಭಯ ಸಮುದಾಯವನ್ನು ಕರೆದು ಚರ್ಚೆ ಮಾಡಿ ದತ್ತ ಪೀಠಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ದತ್ತ ಪೀಠದ ಮುಕ್ತಿಗಾಗಿ ನಾನು ಮಾಲಧಾರಣೆ ಮಾಡಿದ್ದೇನೆ ಎಂದು ಹೇಳಿದರು.