ಕರ್ನಾಟಕ

karnataka

By ETV Bharat Karnataka Team

Published : Nov 7, 2023, 12:01 PM IST

Updated : Nov 7, 2023, 12:48 PM IST

ETV Bharat / state

ನಾಲ್ಕೂ ಸದನಗಳಲ್ಲಿ ಕಾರ್ಯ, ಇಂದಿರಾ ಗಾಂಧಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದ ರಾಜಕಾರಣಿ ಚಂದ್ರೇಗೌಡ

ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಅವರು ನಡೆದು ಬಂದ ರಾಜಕೀಯ ಹಾದಿ ಕುರಿತ ವರದಿ ಇಲ್ಲಿದೆ.

ಮಾಜಿ ಸಚಿವ ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ
ಮಾಜಿ ಸಚಿವ ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ

ಚಿಕ್ಕಮಗಳೂರು : ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ(ಡಿಬಿ ಚಂದ್ರೇಗೌಡ) ಇಂದು ಆಗಲಿದ್ದಾರೆ. ನಾಲ್ಕೂವರೆ ದಶಕದ ಸುದೀರ್ಘ ರಾಜಕೀಯ ಬದುಕಿನಲ್ಲಿ ಸ್ಪೀಕರ್, ಪ್ರತಿಪಕ್ಷ ನಾಯಕ, ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನಾಲ್ಕು ಪಕ್ಷ ಮತ್ತು ನಾಲ್ಕು ಸದನಗಳಾದ ವಿಧಾನಸಭೆ, ವಿಧಾನ ಪರಿಷತ್​, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅಪರೂಪದ ಸಾಧನೆ ಮಾಡಿದ್ದರು. ಹೀಗೆ ಕಾರ್ಯ ನಿರ್ವಹಿಸಿದ್ದರೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗಾಗಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಚಂದ್ರೇಗೌಡರ ರಾಜಕೀಯ ಜೀವನದಲ್ಲಿ ಮಹತ್ವದ ಘಟ್ಟವಾಗಿತ್ತು.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ 1936 ರ ಆಗಸ್ಟ್ 26 ರಂದು ಡಿಎ ಬೈರೇಗೌಡ ಮತ್ತು ಪುಟ್ಟಮ್ಮ ದಂಪತಿ ಪುತ್ರನಾಗಿ ಚಂದ್ರೇಗೌಡ ಜನಿಸಿದ್ದರು. ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ತಮ್ಮ ಬಿಎಸ್​ಸಿ ಶಿಕ್ಷಣವನ್ನು ಮತ್ತು ಬೆಳಗಾವಿಯ ಆರ್​ಎಲ್ ಕಾನೂನು ಕಾಲೇಜಿನಲ್ಲಿ ಎಲ್ಎಲ್​ಬಿ ಪದವಿ ಪಡೆದಿದ್ದರು. ವಿದ್ಯಾಭ್ಯಾಸದ ಬಳಿಕ 1966 ರ ಮೇ 22 ರಂದು ಪೂರ್ಣ ಅವರೊಂದಿಗೆ ವಿವಾಹವಾಯಿತು. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ.

ಕಾಲೇಜು ದಿನಗಳಲ್ಲಿ ರಾಜಕೀಯ ಕ್ಷೇತ್ರದ ಹಾದಿ ತುಳಿದಿದ್ದ ಅವರು, ಮೊದಲು ರೇಣುಕಾಚಾರ್ಯ ಕಾಲೇಜು ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಆರ್​ಎಲ್​ ಕಾಲೇಜಿನಲ್ಲಿದ್ದಾಗ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾದರು. ಕಾಲೇಜು ಮುಗಿಸಿದ ನಂತರ ರಾಜಕೀಯ ಕ್ಷೇತ್ರದತ್ತ ಹೆಜ್ಜೆ ಇಟ್ಟರು. ಅದಕ್ಕೆ ಅವರಿಗೆ ವೇದಿಕೆ ಕಲ್ಪಿಸಿದ್ದು ಪ್ರಜಾ ಸೋಷಿಯಲಿಸ್ಟ್ ಪಕ್ಷ. 1967ರ ವರೆಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿದ್ದ ಚಂದ್ರೇಗೌಡರು, ರಾಜಕೀಯ ಪಕ್ಷದ ಬದಲಾವಣೆ ಮಾಡಿ ಹೊಸ ರಾಜಕಾರಣ ಮಾಡಲು ನಿರ್ಧರಿಸಿ ಕಾಂಗ್ರೆಸ್ ಸೇರಿದ್ದರು.

1971 ರಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರಿನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು. ಆ ಮೂಲಕ ರಾಷ್ಟ್ರ ರಾಜಕಾರಣದಿಂದಲೇ ಅವರ ರಾಜಕೀಯ ಜೀವನ ಆರಂಭವಾಯಿತು. 1977 ರಲ್ಲಿ ಚಿಕ್ಕಮಗಳೂರಿನ ಲೋಕಸಭಾ ಸದಸ್ಯರಾಗಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿ ಪುನರಾಯ್ಕೆಯಾದರು. ಅದಾದ ವರ್ಷದಲ್ಲೇ 1978 ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದರು.

ಇಂದಿರಾಗಾಂಧಿ ಅವರಿಗಾಗಿ ಸಂಸತ್ ಸ್ಥಾನ ಮತ್ತು ಕ್ಷೇತ್ರ ತ್ಯಾಗ ಮಾಡಿದ್ದ ಚಂದ್ರೇಗೌಡರನ್ನು ಕಾಂಗ್ರೆಸ್ 1978-1983 ರವರೆಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವರಾಜು ಅರಸು ಅವರೊಂದಿಗೆ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡು 1980-81ರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಆದರೆ ಅಲ್ಲಿ ರಾಜಕೀಯ ಭವಿಷ್ಯ ಭದ್ರವಾಗದ ಹಿನ್ನೆಲೆಯಲ್ಲಿ ಮತ್ತೆ ಪಕ್ಷ ಬದಲಾವಣೆ ಮಾಡಿ ಜನತಾ ಪಕ್ಷ ಸೇರಿದ್ದರು. 1983 ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸಿದರು. ಈ ಅವದಿಯಲ್ಲಿ ವಿಧಾನಸಭೆ ಸ್ಪೀಕರ್ ಆಗಿ ಚಂದ್ರೇಗೌಡ ಕರ್ತವ್ಯ ನಿರ್ವಹಿಸಿದ್ದರು. 1986 ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಬಳಿಕ ಜನತಾಪಕ್ಷ ಜನತಾದಳವಾಯಿತು. 1989 ರಲ್ಲಿ ಮರಳಿ ರಾಜ್ಯ ರಾಜಕಾರಣಕ್ಕೆ ಬಂದ ಅವರು ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿದರು.

ಜನತಾದಳದಿಂದ ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ ಚಂದ್ರೇಗೌಡ 1999 ರಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದರು. ಎಸ್.ಎಂ ಕೃಷ್ಣ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದರು. ಆದರೆ ಮತ್ತೆ ಪಕ್ಷಾಂತರ ಮಾಡಿದ ಚಂದ್ರೇಗೌಡ ಬಿಜೆಪಿ ಸೇರ್ಪಡೆಯಾದರು. 2009 ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ವಯೋಸಹಜ ಸಮಸ್ಯೆಗಳಿಂದಾಗಿ ಚುನಾವಣೆ ಹಾಗು ರಾಜಕಾರಣ ಎರಡರಿಂದಲೂ ದೂರ ಉಳಿದಿದ್ದ ಚಂದ್ರೇಗೌಡ ಇದೀಗ ಇಹಲೋಕ ತ್ಯಜಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅವರ ಹೆಜ್ಜೆ ಗುರುತು ಅಜರಾಮರವಾಗಿದೆ.

ಇದನ್ನೂ ಓದಿ :ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ನಿಧನ; ಹೆಚ್‌.ಡಿ.ದೇವೇಗೌಡ, ಯಡಿಯೂರಪ್ಪ ಸೇರಿದಂತೆ ಗಣ್ಯರ ಸಂತಾಪ

Last Updated : Nov 7, 2023, 12:48 PM IST

ABOUT THE AUTHOR

...view details