ಚಿಕ್ಕಮಗಳೂರು: ಜಿಲ್ಲೆಯ ಕಾಂಗ್ರೆಸ್ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.
ಸಿಟಿ ರವಿ ಬ್ಯಾಟರಿ ಸೆಂಟರ್; ಕಾಂಗ್ರೆಸ್ ಕಾರ್ಯಕರ್ತರ ವಿಭಿನ್ನ ಪ್ರತಿಭಟನೆ
ನಾಲ್ಕು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದ ಸಿ ಟಿ ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಹತ್ತಾರು ಬ್ಯಾಟರಿಗಳನ್ನು ಇಟ್ಟುಕೊಂಡು, ಸಿ ಟಿ ರವಿ ಬ್ಯಾಟರಿ ಸೆಂಟರ್ ಹೆಸರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಸಿ ಟಿ ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು. ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಅವರಿಗೆ ಬ್ಯಾಟರಿ ಇರಲಿಲ್ಲವಾ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ಖಂಡಿಸಿ ಜಿಲ್ಲೆಯ ಕೆಲ ಕಾಂಗ್ರೆಸ್ ಕಾರ್ಯಕರ್ತರು, ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಸಿ ಟಿ ರವಿ ಬ್ಯಾಟರಿ ಸೆಂಟರ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಚಿವ ಸಿ ಟಿ ರವಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವರನ್ನು ನಿಂದನೆ ಮಾಡುತ್ತಿದ್ದಾರೆ. ಸಮಾಜದ ಯುವಕರನ್ನು ತಪ್ಪುದಾರಿಗೆ ಹೋಗುವಂತೆ ಮಾಡುತ್ತಿದ್ದಾರೆ. ಸವರು ಸಿದ್ದರಾಮಯ್ಯರನ್ನು ಅಪರಾಧಿಯನ್ನಾಗಿ ಮಾಡುವ ರೀತಿ ಮಾತುಗಳನ್ನಾಡಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಸಚಿವರು ಏನು ಬೇಕಾದರೂ ಮಾತನಾಡಬಹುದು ಎಂದುಕೊಂಡು, ಕಂಡ ಕಂಡಲ್ಲಿ ಜನ ನಾಯಕರುಗಳಿಗೆ ಟೀಕೆ ಮಾಡುತ್ತಿದ್ದಾರೆ. ಸಿ ಟಿ ರವಿ ಅವರಿಂದ ರಾಜ್ಯಕ್ಕಾಗಲಿ, ರಾಷ್ಟ್ರಕ್ಕಾಗಲಿ ಯಾವುದೇ ರೀತಿಯ ಅನುಕೂಲವಿಲ್ಲ ಎಂದು ಹತ್ತಾರು ಬ್ಯಾಟರಿಗಳನ್ನು ಇಟ್ಟುಕೊಂಡು, ಸಿ ಟಿ ರವಿ ಬ್ಯಾಟರಿ ಸೆಂಟರ್ ಹೆಸರಿನಲ್ಲಿ ಪ್ರತಿಭಟನೆ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.