ಕರ್ನಾಟಕ

karnataka

By ETV Bharat Karnataka Team

Published : Oct 26, 2023, 6:23 PM IST

Updated : Oct 26, 2023, 7:53 PM IST

ETV Bharat / state

ಏಷ್ಯನ್‌ ಪ್ಯಾರಾ ಗೇಮ್ಸ್​: ಚಿನ್ನ ಗೆದ್ದ ಚಿಕ್ಕಮಗಳೂರಿನ ವಿಶೇಷಚೇತನ ಪ್ರತಿಭೆ ರಕ್ಷಿತಾ ರಾಜು

ಚೀನಾದ ಹಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಚಿಕ್ಕಮಗಳೂರಿನ ಸ್ಪರ್ಧಿ ಚಿನ್ನದ ಪದಕ ಗೆದ್ದಿದ್ದಾರೆ.

ಏಷಿಯನ್ ಪ್ಯಾರಾ ಗೇಮ್ಸ್​ನಲ್ಲಿ ಚಿನ್ನದ ಪದಕ ಪಡೆದುಕೊಂಡ ಚಿಕ್ಕಮಗಳೂರಿನ ಪ್ರತಿಭೆ
ಏಷಿಯನ್ ಪ್ಯಾರಾ ಗೇಮ್ಸ್​ನಲ್ಲಿ ಚಿನ್ನದ ಪದಕ ಪಡೆದುಕೊಂಡ ಚಿಕ್ಕಮಗಳೂರಿನ ಪ್ರತಿಭೆ

ಏಷ್ಯನ್‌ ಪ್ಯಾರಾ ಗೇಮ್ಸ್​ನಲ್ಲಿ ಚಿನ್ನದ ಪದಕ ಪಡೆದುಕೊಂಡ ಚಿಕ್ಕಮಗಳೂರಿನ ಪ್ರತಿಭೆ

ಚಿಕ್ಕಮಗಳೂರು: ಚೀನಾದ ಹಾಂಗ್​ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನ ಸಮೀಪದ ಗುಡ್ನಳ್ಳಿಯ ವಿಶೇಷಚೇತನ ಓಟಗಾರ್ತಿ ರಕ್ಷಿತಾ ರಾಜು ಎಂಬವರು 1,500 ಮೀಟರ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯ ಹಾಗು ದೇಶಕ್ಕೆ ಕೀರ್ತಿ ತಂದಿದ್ದಾರೆ.

1,500 ಮೀ. ಓಟವನ್ನು 5:21:45 ಸೆಕೆಂಡಿನಲ್ಲಿ ಕ್ರಮಿಸುವ ಮೂಲಕ ಇವರು ಈ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಪ್ಯಾರಿಸ್​ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಕ್ಷಿತಾ 5ನೇ ಸ್ಥಾನ ಪಡೆದಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು.

ಕೋಚ್ ರಾಹುಲ್ ಬಾಲಕೃಷ್ಣ ಅವರೂ ಕೂಡ 1,500 ಮೀ. ಪುರುಷರ ವಿಭಾಗದ ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ಶಾರ್ಜಾ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್‌ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ರಕ್ಷಿತಾ, ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಜಯಿಸಿದ್ದರು.

ಕಳೆದ ವರ್ಷ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ 400, 800 ಹಾಗೂ 1,500 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದು, ಪುಣೆಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನ 400 ಹಾಗೂ 1500 ಮೀ ಓಟದಲ್ಲಿ ಚಿನ್ನ ಗೆದ್ದಿದ್ದರು. ರಕ್ಷಿತಾ ಅವರ ತಂದೆ‌ ರಾಜು ಮೂಡಿಗೆರೆ ತಾಲೂಕಿನ ದೇವರುಂದ ಗ್ರಾಮದವರು. ವಿವಾಹವಾದ ನಂತರ ಗುಡ್ನಳ್ಳಿಯಲ್ಲಿ ಕುಟುಂಬಸಮೇತ ನೆಲೆಸಿದ್ದಾರೆ.

ಇದನ್ನೂ ಓದಿ:ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್​ನಲ್ಲಿ ಚಿನ್ನ ಗೆದ್ದ ಮಂಗಳೂರಿನ ಯುವಕ... ಇಲ್ಲಿದೆ ಅವರ ಮನದಾಳದ ಮಾತು!

ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆದ ರಕ್ಷಿತಾ: ಹುಟ್ಟಿನಿಂದಲೇ ಅಂಧರಾಗಿದ್ದ ರಕ್ಷಿತಾ ಬಾಲ್ಯದಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡಿದ್ದು, ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆದವರು. ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಕ್ರೀಡೆಯ ಕಡೆಗೆ ರಕ್ಷಿತಾ ಆಸಕ್ತಿ ಬೆಳೆಸಿಕೊಂಡಿದ್ದರು.

ಆಶಾಕಿರಣ ಶಾಲೆಯ ಸಂಸ್ಥಾಪಕರಾದ ಡಾ.ಜೆ.ಪಿ.ಕೃಷ್ಣೇಗೌಡ ಅವರು ರಕ್ಷಿತಾ ಅವರ ಪ್ರತಿಭೆ ಗುರುತಿಸಿ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಕೋಚ್ ರಾಹುಲ್ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ರಕ್ಷಿತಾ ಪ್ರಸ್ತುತ ಬೆಂಗಳೂರಿನಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಇದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ:ಏಷ್ಯನ್​ ಪ್ಯಾರಾ ಗೇಮ್ಸ್​: ಪುರುಷರ ಹೈಜಂಪ್​ನಲ್ಲಿ ಭಾರತಕ್ಕೆ ಚಿನ್ನ ಸೇರಿ ಮೂರು​ ಪದಕಗಳ ಸಿಂಚನ

Last Updated : Oct 26, 2023, 7:53 PM IST

ABOUT THE AUTHOR

...view details