ಚಿಕ್ಕಮಗಳೂರು :1200 ವರ್ಷಗಳ ಹಿಂದೆ ಕಾಶ್ಮೀರದ ಶಾರದಾ ಪೀಠದಿಂದ ಶಂಕರಾಚಾರ್ಯರು ತಂದಿದ್ದರು ಎನ್ನುವ ಐತಿಹ್ಯವಿರುವ ಶೃಂಗೇರಿ ಶಾರದಾಂಬೆಯ ಮೂರ್ತಿಯ ಪ್ರತಿರೂಪವನ್ನ ಶೃಂಗೇರಿ ಮಠದ ವತಿಯಿಂದ ಕಾಶ್ಮೀರದ ಶಾರದಾ ಪೀಠಕ್ಕೆ ಮಾಡಿಸಿ ಕೊಡಲು ಶೃಂಗೇರಿ ಮಠದ ಗುರುವತ್ರಯರು ಒಪ್ಪಿಗೆ ಸೂಚಿಸಿದ್ದಾರೆ.
ಕಾಶ್ಮೀರ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್ ಶೃಂಗೇರಿಗೆ ಬಂದು ಮಠದ ಗುರವತ್ರಯರಾದ ಭಾರತೀ ತೀರ್ಥ ಹಾಗೂ ವಿಧುಶೇಖರ ಶ್ರೀಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ.
ಈ ವೇಳೆ, ಶೃಂಗೇರಿ ಮಠದ ಗುರುವತ್ರಯರು ಶೃಂಗೇರಿ ಶಾರದಾಂಬೆಯ ಮೂಲ ವಿಗ್ರಹದ ಪ್ರತಿಕೃತಿಯನ್ನ ಕಾಶ್ಮೀರದ ಶಾರದಾ ಮಠಕ್ಕೆ ಕಳುಹಿಸಿ ಕೊಡಲು ಒಪ್ಪಿದ್ದಾರೆ.
ಶೃಂಗೇರಿಯ ಮೂಲವಿಗ್ರಹದ ಪ್ರತಿಕೃತಿ ನೀಡಲು ಒಪ್ಪಿಗೆ ಪಾಕ್ನ ಆಕ್ರಮಿತ ಕಾಶ್ಮೀರದ ಗಡಿಯ ಕುಪ್ವಾರ ಜಿಲ್ಲೆಯ ಟ್ವಿಟಾಲ್ನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ. 2021ರ ಡಿಸೆಂಬರ್ನಲ್ಲೇ ದೇವಸ್ಥಾನಕ್ಕೆ ಶಂಕು ಸ್ಥಾಪನೆ ಕೂಡ ನೆರವೇರಿದೆ. ದೇವಸ್ಥಾನ ನಿರ್ಮಾಣದ ಜವಾಬ್ದಾರಿ ಹೊತ್ತಿರೋ ಶಾರದಾ ಸೇವಾ ಸಮಿತಿ ಸದಸ್ಯರು, ಶೃಂಗೇರಿಗೆ ಬಂದು ಶ್ರೀಗಳ ಜತೆ ಚರ್ಚಿಸಿದ್ದಾರೆ.
ಹಿಂದೆ ಕಾಶ್ಮೀರಿ ಶೃಂಗೇರಿ ಪೀಠದಲ್ಲಿದ್ದ ಮೂಲ ವಿಗ್ರಹ ಈಗ ಶೃಂಗೇರಿ ಮಠದಲ್ಲಿದೆ. ಹಾಗಾಗಿ, ಅದೇ ರೂಪವನ್ನ ಹೋಲುವ ಶೃಂಗೇರಿ ಶಾರದಾಂಬೆಯ ಪ್ರತಿರೂಪದ ಮೂರ್ತಿಯನ್ನ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮಠದ ಗುರುಗಳು ಕಾಶ್ಮೀರ ಶಾರದಾ ಸೇವಾ ಸಮಿತಿಯ ರವೀಂದ್ರ ಪಂಡಿತ್ಗೆ ಭರವಸೆ ನೀಡಿದ್ದಾರೆ.
ಕಾಶ್ಮೀರದಲ್ಲಿ 2021ರ ಡಿಸೆಂಬರ್ 2ರಂದೇ ಭೂಮಿ ಪೂಜೆ ನಡೆದಿದ್ದು, ದೇಗುಲದ ವಾಸ್ತುಶಿಲ್ಪ ಹಿಂದಿನ ಸರ್ವಜ್ಞ ಪೀಠದ ಮಾದರಿಯಲ್ಲೇ ಇರಲಿದೆ. ದೇವಾಲಯ ಕಲ್ಲುಗಳಿಂದ ನಿರ್ಮಾಣವಾಗಲಿದ್ದು, ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿವೆ. ಚಳಿಗಾಲ ಹೊರತುಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಇರಲಿದೆ.