ಚಿಕ್ಕಬಳ್ಳಾಪುರ: ತನ್ನ ಪ್ರೀತಿಯನ್ನು ಪೋಷಕರು ತಿರಸ್ಕರಿಸಿದ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬದಿಯ ಶೆಟ್ಟಿಗೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬಾಗೇಪಲ್ಲಿ ತಾಲೂಕಿನ ಪಿಚ್ಚಲವಾರಪಲ್ಲಿ ಗ್ರಾಮದ ಮಂಜು ನಾಯಕ್ (24) ಮೃತಪಟ್ಟ ಯುವಕ.
ಅಪ್ರಾಪ್ತ ಹಾಗೂ ಅಂತರ್ಜಾತಿಯ ಬಾಲಕಿಯನ್ನು ಮಂಜು ಪ್ರೀತಿಸುತ್ತಿದ್ದ. ಹೀಗಾಗಿ, ಎರಡೂ ಕಡೆಯ ಪೋಷಕರು ಮದುವೆ ತಿರಸ್ಕರಿಸಿದ್ದರು. ಇದರಿಂದ ಬೇಸರಗೊಂಡು ಕಳೆದ ಮೂರು ದಿನಗಳ ಹಿಂದೆಯೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮನೆಯವರು ರಕ್ಷಿಸಿದ್ದರು. ಇದಾದ ನಂತರ ಬೆಂಗಳೂರಿಗೆ ಉದ್ಯೋಗಕ್ಕೆ ಹೋಗುವುದಾಗಿ ಹೇಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.