ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ರೈಲ್ವೆ ನಿಲ್ದಾಣದಲ್ಲೇ ಅವಳಿ ಮಕ್ಕಳಿಗೆ ಜನ್ಮ‌ನೀಡಿದ ಮಹಿಳೆ

ಗೌರಿಬಿದನೂರಿನ ರೈಲು ನಿಲ್ದಾಣದಲ್ಲಿಯೇ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

ರೈಲ್ವೆ ನಿಲ್ದಾಣದಲ್ಲಿ ಅವಳಿ ಮಕ್ಕಳಿಗೆ ಜನ್ಮ‌ನೀಡಿದ ಮಹಿಳೆ
ರೈಲ್ವೆ ನಿಲ್ದಾಣದಲ್ಲಿ ಅವಳಿ ಮಕ್ಕಳಿಗೆ ಜನ್ಮ‌ನೀಡಿದ ಮಹಿಳೆ

By ETV Bharat Karnataka Team

Published : Aug 31, 2023, 4:51 PM IST

ಚಿಕ್ಕಬಳ್ಳಾಪುರ :ರೈಲಿನಲ್ಲಿ ಪ್ರಯಾಣ ಮಾಡುವಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ನಿಲ್ದಾಣದಲ್ಲಿ ಇಳಿಯುತ್ತಿದಂತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಚಂದ್ರಮ್ಮ ಅವಳಿ ಮಕ್ಕಳಿಗೆ ಜನ್ಮ ನೀಡಿದವರು. ಇವರು 8 ತಿಂಗಳ ಗರ್ಭಿಣಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಚಿತ್ತಾಪುರ ಗ್ರಾಮದ ಸಂಬಂಧಿಕರ ಮನೆಗೆ ಸಹೋದರ ಹಾಗೂ ಸಂಬಂಧಿಕ‌ರೊಂದಿಗೆ ಉದ್ಯಾನ್ ಎಕ್ಸ್​ಪ್ರೆಸ್ ಮೂಲಕ ಕಲಬುರಗಿಗೆ ಪ್ರಯಾಣಿಸುತ್ತಿದ್ದರು.

ರೈಲು ಬೆಂಗಳೂರಿನಿಂದ ಯಲಹಂಕ ತಲಪುವಷ್ಟರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲ್ವೆ ಕಂಟ್ರೋಲ್ ರೂಂಗೆ ಕರೆ ಮಾಡಿ, ಸಹಾಯಕ್ಕೆ ಮನವಿ‌ ಮಾಡಿದ್ದರು. ಅದರಂತೆ, ಗೌರಿಬಿದನೂರು ರೈಲ್ವೆ ನಿಲ್ದಾಣದಲ್ಲಿ ಇಳಿದು ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ ಮಾಡಲಾಗಿತ್ತು.

ಆದರೆ, ಚಂದ್ರಮ್ಮಗೆ ಗೌರಿಬಿದನೂರು ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಹೆರಿಗೆ ನೋವು ಮತ್ತಷ್ಟು ಹೆಚ್ಚಾಗಿ ನಿಲ್ದಾಣದ ಫ್ಲಾಟ್ ಫಾರ್ಮ್​ನಲ್ಲೇ ಅವರಿಗೆ ಹೆರಿಗೆಯಾಗಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ. ಗೌರಿಬಿದನೂರು ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.

ಪಾಲಿಕೆ ಸಭೆಗೆ ಆಗಮಿಸಿದ ತುಂಬು ಗರ್ಭಿಣಿ (ಪ್ರತ್ಯೇಕ ಘಟನೆ): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಇಂದು ತುಂಬು ಗರ್ಭಿಣಿಯಾಗಿದ್ದ ಪಾಲಿಕೆ ಸದಸ್ಯೆ ಆಗಮಿಸಿದ್ದರು. ಸಭೆಗೆ ಬರುತ್ತಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ನವೀಕರಣಗೊಂಡ ಪಾಲಿಕೆಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯುತ್ತಿತ್ತು. ವಾರ್ಡ್ ಸಂಖ್ಯೆ 54ರ ಸದಸ್ಯೆ ಹಾಗು ತುಂಬು ಗರ್ಭಿಣಿ ಸರಸ್ವತಿ ಧೋಂಗಡಿ ಆಗಮಿಸಿದ್ದರು. ಸಭೆ ನಡೆಯುತ್ತಿದ್ದಾಗ ಇವರಿಗೆ ಆಯಾಸವಾಗಿದ್ದು, ಮತ್ತೋರ್ವ ಸದಸ್ಯರ ಸಹಾಯದಿಂದ ನಿರ್ಗಮಿಸಿದರು. ಪಾಲಿಕೆಯ ಲಿಫ್ಟ್​ ಅವ್ಯವಸ್ಥೆಯಿಂದಾಗಿ ಸುಮಾರು ಹೊತ್ತು ಕಾಯುವಂತಾಯಿತು. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಬಸ್​​ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ನಿರ್ವಾಹಕಿ.. ಕಂಡಕ್ಟರ್​ ಸಮಯಪ್ರಜ್ಞೆ, ಮಾನವೀಯತೆಗೆ ಸಲಾಂ

ಆಸ್ಪತ್ರೆ ಹೊರಗಡೆ ಮಗುವಿಗೆ ಜನ್ಮ (ಪ್ರತ್ಯೇಕ ಘಟನೆ): ಖಾಸಗಿ ಆಸ್ಪತ್ರೆಯ ಖರ್ಚು ಭರಿಸಲಾಗದೇ ಬಹಳಷ್ಟು ಮಹಿಳೆಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಅಥವಾ ಅಲ್ಲಿದ್ದವರ ನಿರ್ಲಕ್ಷ್ಯದಿಂದಲೋ ಬಹಳಷ್ಟು ಬಾರಿ ಗಂಭೀರ ಸ್ವರೂಪದ ಅಚಾತುರ್ಯಗಳಾಗುತ್ತವೆ. ಇದಕ್ಕೆ ಪೂರಕವೆಂಬಂತೆ ವಿಜಯಪುರದಲ್ಲಿ ಘಟನೆ ನಡೆದಿತ್ತು. ಹೆರಿಗೆ ನೋವು ತಾಳಲಾರದೆ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಡೆಯೇ ಮಗುವಿಗೆ (ಫೆಬ್ರವರಿ 24-2023) ಜನ್ಮ ನೀಡಿದ್ದರು. ನಾಗಠಾಣ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ:ಹು-ಧಾ ಪಾಲಿಕೆ ಸಭೆಗೆ ಆಗಮಿಸಿದ ಗರ್ಭಿಣಿ: ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು

ABOUT THE AUTHOR

...view details