ಚಿಕ್ಕಬಳ್ಳಾಪುರ:ನೂತನ ತಾಲೂಕು ಚೇಳೂರು ಕರ್ನಾಟಕ ಪಬ್ಲಿಕ್ ಶಾಲೆಯ ಎದುರಿರುವ ಮೈದಾನದಲ್ಲಿ ಬಹುತೇಕ ಆವರಣವನ್ನು ಮಳೆ ನೀರು ಆವರಿಸಿಕೊಂಡಿದೆ. ಇದರಿಂದ ಶಾಲೆಗೆ ವಿದ್ಯಾರ್ಥಿಗಳ ಗೈರು ಹಾಜರಿ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.
ಮಳೆ ನೀರು ನಿಂತು ದುರ್ವಾಸನೆ ಬೀರುವ ಶಾಲಾ ಆವರಣ: ಮಕ್ಕಳ ಪರದಾಟ
ನೂತನ ತಾಲೂಕು ಚೇಳೂರು ಕರ್ನಾಟಕ ಪಬ್ಲಿಕ್ ಶಾಲೆಯ ಎದುರಿರುವ ಮೈದಾನದಲ್ಲಿ ಬಹುತೇಕ ಆವರಣವನ್ನು ಮಳೆ ನೀರು ಆವರಿಸಿಕೊಂಡಿದೆ.
ಇಲ್ಲಿನ ಶಾಲಾ ಆವರಣದಲ್ಲಿ ಮಳೆ ನೀರಿನೊಂದಿಗೆ ಊರಿನ ತ್ಯಾಜ್ಯ ಹರಿದು ಬಂದು ಶೇಖರಣೆಯಾಗುತ್ತದೆ. ಅಲ್ಲದೆ ನೀರು ಕೂಡ ಹರಿದು ಹೋಗದೆ ಅಲ್ಲಿಯೇ ನಿಂತು ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಡುತ್ತದೆ. ಇದರಿಂದ ಊರಿನಲ್ಲಿ ಮಳೆ ಬಂತೆಂದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಯ ಪಡುವಂತಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿದೆ. ಇರುವ ಶಿಕ್ಷಕರು ಉತ್ತಮವಾಗಿ ಪಾಠ ಮಾಡುವುದರಿಂದ ಸುತ್ತಮುತ್ತಲ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ.
ಆದರೆ ಶಾಲೆಯ ದುಸ್ಥಿತಿ ಇದೀಗ ಪೋಷಕರಿಗೂ ಬೇಸರ ತರಿಸಿದ್ದು, ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಚಿಂತನೆ ನಡೆಸುತ್ತಿದ್ದಾರೆ. ಮಳೆ ಬಂದರೆ ಶಾಲಾವರಣದಲ್ಲಿ ಶೇಖರಣೆಯಾಗುವ ನೀರು ಹರಿದು ಹೋಗಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಅದು ಇಂಗಿ ಹೋಗಬೇಕು. ಅಲ್ಲಿ ತನಕ ದುರ್ವಾಸನೆ ಬೀರುವುದರಿಂದ ಆ ದುರ್ವಾಸನೆಯನ್ನು ಸಹಿಸಿಕೊಂಡು ಪಾಠ ಕೇಳುವುದು ಮಕ್ಕಳಿಗೆ ಅನಿವಾರ್ಯವಾಗಿದೆ.