ಚಿಕ್ಕಬಳ್ಳಾಪುರ:ಶಾಸಕ ಪ್ರದೀಪ್ ಈಶ್ವರ್ಗೆ ಧೈರ್ಯ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದು ಸ್ವತಂತ್ರವಾಗಿ ನನ್ನ ಎದರು ಸ್ಪರ್ಧಿಸಲಿ ಯಾರು ಗೆಲ್ಲುತ್ತಾರೆ ಎಂದು ನೋಡೋಣ ಎಂದು ಮಾಜಿ ಸಚಿವ ಕೆ ಸುಧಾಕರ್ ಸವಾಲು ಹಾಕಿದ್ದಾರೆ. ಹಾಲಿ ಶಾಸಕರ ಬೆಂಬಲಿಗರಿಂದ ಮಾಜಿ ಸಚಿವರ ಮುಖಂಡನಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟಿಸಿ ಮಾಜಿ ಸಚಿವ ಸುಧಾಕರ್ ಎಸ್ಪಿ ಡಿ ಎಲ್ ಸಂತೋಷ್ ಅವರಿಗೆ ಇಂದು ದೂರು ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಸಕರು ಖಾಸಗಿ ಸಂಸ್ಥೆಯೊಂದರಲ್ಲಿ ತಾಲೂಕು ಅಧಿಕಾರಿಗಳ ಸಭೆ ನಡೆಸಿದ್ದ ವಿಷಯವಾಗಿ ಬಿಜೆಪಿ ಮುಖಂಡ ಸಂತೋಷ್ ರಾಜು ಮಾಧ್ಯಮಗೋಷ್ಟಿ ನಡೆಸಿ, ಖಾಸಗಿ ಸಂಸ್ಥೆಯಲ್ಲಿ ತಾಲೂಕಿನ ಅಧಿಕಾರಿಗಳ ಸಭೆ ಮಾಡಿರುವುದು ಕಾನೂನು ಬಾಹಿರ. ಹೀಗಾಗಿ ಶಾಸಕರು ರಾಜೀನಾಮೆ ನೀಡಬೇಕು, ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡ ಸಂತೋಷ್ ರಾಜು ಅವರ ಅಂಗಡಿ ಬಳಿ ಹೋಗಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಹಾಡಹಗಲೇ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಸಂತೋಷ್ ಅವರೊಂದಿಗೆ ನಾವಿದ್ದೇವೆ. ನಾವು ಸೋತಿದ್ದಿವಿ ಹೊರತು ಸತ್ತಿಲ್ಲ. ನಮ್ಮ ಕ್ಷೇತ್ರದಲ್ಲಿ ಅಥವಾ ಬೇರೆ ಯಾವ ಕ್ಷೇತ್ರದಲ್ಲಾದರೂ ಬಿಜೆಪಿ ಮುಖಂಡರಿಗೆ ಅನ್ಯಾಯವಾದರೇ ನಾವು ಸುಮ್ಮನಿರಲ್ಲಿ. ನಮ್ಮ ರಕ್ತ ಕೊಟ್ಟಾದರೂ ಅವರನ್ನು ಉಳಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವರು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಹಿಂಬಾಲಕರಿಗೆ ಎಚ್ಚರಿಕೆ ರವಾನಿಸಿದರು.