ಕರ್ನಾಟಕ

karnataka

ETV Bharat / state

ಜನರನ್ನು ಕಾರ್ಪೋರೇಟ್ ಜಗತ್ತಿನ ಅಡಿಯಾಳುಗಳಾಗಿ ಮಾಡುತ್ತಿರುವುದು ಖಂಡನೀಯ: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ

ದೇಶದ ಜನರನ್ನು ಕಾರ್ಪೊರೇಟ್ ಜಗತ್ತಿನ ಅಡಿಯಾಳುಗಳನ್ನಾಗಿಸುತ್ತಿರುವುದು ಖಂಡನೀಯ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಘುರಾಮರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

By

Published : Jun 30, 2020, 3:47 PM IST

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಘುರಾಮರೆಡ್ಡಿ
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಘುರಾಮರೆಡ್ಡಿ

ಬಾಗೇಪಲ್ಲಿ (ಚಿಕ್ಕಬಳ್ಳಾಪುರ):ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಜನರನ್ನು ಕಾರ್ಪೊರೇಟ್ ಜಗತ್ತಿನ ಅಡಿಯಾಳುಗಳನ್ನಾಗಿಸುತ್ತಿರುವುದು ಖಂಡನೀಯ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ರಘುರಾಮರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಸಿಪಿಐಎಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜನಾಭಿಪ್ರಾಯ ತೆಗೆದುಕೊಳ್ಳದೆ ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿರುವುದು ಖಂಡನೀಯ ಎಂದರು.

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಘುರಾಮರೆಡ್ಡಿ

ಇಂದು ದೇಶವ್ಯಾಪಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ದಿನಗೂಲಿ, ರೈತರು, ಕೃಷಿ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಹಸಿವನ್ನೇ ಸವಾಲಾಗಿ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಠೋರ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುತ್ ವಿಧೇಯಕ ತಿದ್ದುಪಡಿ ಸೇರಿದಂತೆ ಹಲವು ಜನಸಾಮಾನ್ಯರ ಪರವಾಗಿದ್ದ ಕಾಯ್ದೆಗಳನ್ನು ಬಂಡವಾಳಶಾಹಿಗಳ ಪರವಾಗಿ ಮಾಡಲಾಗುತ್ತಿದೆ. ಈ ಮೂಲಕ ರೈತರನ್ನು ಬೀದಿಗೆ ಬರುವಂತೆ ಮಾಡಿ ದೇಶದ ಪ್ರಜೆಗಳನ್ನು ಕಾರ್ಪೊರೇಟ್ ಜಗತ್ತಿನ ಜೀತದಾಳುಗಳನ್ನಾಗಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಕೂಡಲೇ ಇಂತಹ ಜನಾಭಿಪ್ರಾಯವಿಲ್ಲದ ತಿದ್ದುಪಡಿ, ಕಾನೂನುಗಳನ್ನು ಜಾರಿ ಮಾಡುವ ದುಸ್ಸಾಹಸದಿಂದ ಸರ್ಕಾರಗಳು ದೂರ ಸರಿಯಬೇಕು. ಇಂತಹ ಕಾಯ್ದೆಗಳನ್ನು ಜಾರಿ ಮಾಡದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸರ್ಕಾರಗಳಿಗೆ ಮನವಿ ಪತ್ರಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.

ಮನವಿ ಪತ್ರ ಸ್ವೀಕರಿಸಿದ ಕೊತ್ತಕೋಟೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾಬು ಅವರು, ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details