ಚಿಕ್ಕಬಳ್ಳಾಪುರ: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ವಲ್ಪವಾದರೂ ಸಹಾಯ ಮಾಡುವ ಹೃದಯ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ನಿಂದ ನಿರ್ಮಿಸಿರುವ 300 ಹಾಸಿಗೆಗಳ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆ ಮತ್ತು ಮಕ್ಕಳ ತೀವ್ರ ನಿಗಾ ಘಟಕವನ್ನು ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಸತ್ಯಸಾಯಿ ಗ್ರಾಮದಲ್ಲಿ ಸೇವಾ ಭಾವ ಎದ್ದು ಕಾಣುತ್ತದೆ. ರಾಜ್ಯದ ಸೇವೆಯಲ್ಲಿ ಇಲ್ಲಿ ಕಲಿತದ್ದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ನಿರ್ವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕಣ್ಣಿಗೆ ಕಾಣದ ಭಗವಂತನ ಕಾಣುವ ವಾತಾವರಣ ಇಲ್ಲಿದೆ
ಕಣ್ಣಿಗೆ ಕಾಣದ ಭಗವಂತನನ್ನು ಕಾಣುವ ಹಾಗೂ ಅನುಭವಿಸುವ ವಾತಾವರಣ ಸತ್ಯಸಾಯಿ ಗ್ರಾಮದಲ್ಲಿದೆ. ಕಲಿಯುಗದಲ್ಲಿ ಗುರುವಿನ ಮೂಲಕ ಪರಮಾತ್ಮನನ್ನು ಕಾಣಬಹುದು. ದೈವಿಕ ಪ್ರೇರಣೆಯಿಂದ ಅಮೆರಿಕ, ಆಫ್ರಿಕಾ, ಯೂರೋಪ್ ಹಲವಾರು ವಿದೇಶಗಳಿಂದ ಸತ್ಯಸಾಯಿ ಭಕ್ತರು ತಮ್ಮ ವೃತ್ತಿಯನ್ನು ಬಿಟ್ಟು ಇಲ್ಲಿ ಸೇವೆ ಮಾಡೋಕೆ ಬಂದಿದ್ದಾರೆ.
ಈ ಸೇವಾ ಮನೋಭಾವ ಶಕ್ತಿ ಸರ್ವವ್ಯಾಪಿಯಾಗಬೇಕು. ಅಧ್ಯಾತ್ಮಿಕವಾದ ಶಕ್ತಿ ಸದಾ ಸತ್ಯ , ಸರ್ವವ್ಯಾಪಿ, ಸರಳವಾಗಿರುತ್ತದೆ. ಸರಳತೆಯಲ್ಲಿ ದೈವತ್ವವನ್ನು ಕೂಡಿರುವುದೇ ಸೇವೆ ಎಂದರು.
ಮಧುಸೂದನ ಸ್ವಾಮೀಜಿಯವರ ಇಚ್ಛೆಯಂತೆ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಮೆಡಿಕಲ್ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು ಎಂದ ಮುಖ್ಯಮಂತ್ರಿಗಳು ,ಇಲ್ಲಿ ಆಸ್ಪತ್ರೆ ನಿರ್ಮಾಣವಾದರೆ ಬಡವರಿಗೆ, ಕಷ್ಟದಲ್ಲಿರುವವರಿಗೆ ಸಹಾಯವಾಗುವುದು. ಅಲ್ಲದೇ ಇಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತು ಬೇರೆ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವ್ಯತ್ಯಾಸವಿದೆ. ಈ ವಿದ್ಯಾರ್ಥಿಗಳು ವೈದ್ಯ ವೃತ್ತಿಯನ್ನು ಸೇವೆಯೆಂದು ಸ್ವೀಕರಿಸುತ್ತಾರೆ ಎಂದರು.