ಕರ್ನಾಟಕ

karnataka

By

Published : May 9, 2021, 5:00 PM IST

ETV Bharat / state

ಚಾಮರಾಜನಗರದ ಹಳ್ಳಿಗಳಲ್ಲಿ ಕೊರೊನಾ ಕಠಿಣ ನಿಯಮ.. ಶುರುವಾಯ್ತು ಸ್ವಯಂ ನಿಯಂತ್ರಣ!

ಹಳ್ಳಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡು ಜನತೆ ಆತಂಕಕ್ಕೀಡಾಗಿದ್ದಾರೆ. ಆದರೆ ಕೆಲ ಗ್ರಾಮಗಳು ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವ ಮೂಲಕ ಕೊರೊನಾ ಹರಡದಂತೆ ತಡೆಯಲು ಮುಂದಾಗಿವೆ. ಈ ಹಿನ್ನೆಲೆ ಗ್ರಾಮದಲ್ಲಿ ತಾವಾಗಿಯೇ ಹಲವು ನಿಯಮಗಳನ್ನು ವಿಧಿಸಿಕೊಂಡಿದ್ದಾರೆ.

Villages that undergo self lockdown to prevent from corona spread
ಸ್ವಯಂ ನಿರ್ಬಂಧದ ಮೊರೆ ಹೋದ ಗ್ರಾಮ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕೆಲವು ಹಳ್ಳಿಗಳಲ್ಲಿ ಸ್ವಯಂ ಪ್ರೇರಣೆಯಿಂದ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಇನ್ನಿತರೆ ಗ್ರಾಮಗಳಿಗೆ ಮಾದರಿಯಾಗುತ್ತಿವೆ.

ಕೊರೊನಾ ಮೊದಲನೆ ಅಲೆಯಲ್ಲಿ ಗಾಂಭೀರ್ಯ ತೋರಿದ್ದ ಜನರು 2ನೇ ಅಲೆಯಲ್ಲಿ ಮೈ ಮರೆತಿದ್ದರು. ಈಗೀಗ ಹಳ್ಳಿಗರು ಕೊರೊನಾಗೆ ಕಟ್ಟೆಚ್ಚರ ವಹಿಸುತ್ತಿದ್ದು, ತಾವೇ ಹಾಕಿಕೊಂಡ ನಿಯಮ ಉಲ್ಲಂಘಿಸಿದರೇ ದಂಡ ಕಟ್ಟಬೇಕಿದೆ. ಕೆಲವು ಹಳ್ಳಿಗಳಲ್ಲಿ ಬೇರೆ ಊರಿನವರಿಗೂ ಅನ್ವಯ ಎಂಬಷ್ಟರ ಮಟ್ಟಿಗೆ ಸೆಲ್ಫ್​​​​ ಲಾಕ್​​ಡೌನ್​​​ ವಿಧಿಸಿಕೊಂಡಿದ್ದಾರೆ.

ಸ್ವಯಂ ನಿರ್ಬಂಧ

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಕೊರೊನಾ ತಡೆಗಟ್ಟುವ ಉದ್ದೇಶದಿಂದ ಗ್ರಾಮದಿಂದ ಯಾರೂ ಸಹ ಹೊರಹೋಗದಂತೆ ಹಾಗೂ ಹೊರಗಿನಿಂದ ಯಾರೊಬ್ಬರೂ ಒಳಬಾರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡು ಈಗಾಗಲೇ 10 ದಿನದ ಮೇಲಾಗಿದ್ದು, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ವಯಂ ನಿರ್ಬಂಧದ ಮೊರೆ ಹೋದ ಗ್ರಾಮ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದು, ಗ್ರಾಮದವರು ಬೆಂಗಳೂರು, ಮೈಸೂರು ಹಾಗೂ ಇನ್ನಿತರ ನಗರಗಳಲ್ಲಿ ವಾಸಿಸುತ್ತಿದ್ದು, ಇವರು ಗ್ರಾಮಕ್ಕೆ ಬಾರದಂತೆ ಹಾಗೂ ಗ್ರಾಮದಿಂದ ಸಾರ್ವಜನಿಕರು ಬೇರೆ ಗ್ರಾಮಕ್ಕೆ ಹೋಗದಂತೆ ಕಟ್ಟಾಜ್ಞೆ ಹೊರಡಿಸಲಾಗಿದೆ. ವಿವಿಧ ಕಂಪನಿಯ ಫೈನಾನ್ಸ್​ನ ಪ್ರತಿನಿಧಿಗಳು ಪ್ರತಿದಿನ ಗ್ರಾಮದ ಸ್ವಸಹಾಯ ಸಂಘಗಳಿಗೆ ಹಣಕಾಸು ವಸೂಲಿ ಮಾಡಲು ಆಗಮಿಸುತ್ತಿದ್ದಾರೆ. ಇವರು ಸಹ ಕೊರೊನಾ ಆತಂಕ ಕಡಿಮೆಯಾಗುವರೆಗೂ ಗ್ರಾಮದ ಒಳಗೆ ಬಾರಬಾರದೆಂದು ಮನವಿ ಮಾಡಿದ್ದಾರೆ.

ರಸ್ತೆ ಬಂದ್ ಮಾಡಿದ ಗ್ರಾಮಸ್ಥರು

ಚಾಮರಾಜನಗರದ ಡಾ.ಬಾಬು ಜಗಜೀವನ್‌ರಾಮ್​​​ ಬಡಾವಣೆಯ ನಿವಾಸಿಗಳು ತಮ್ಮ ಬಡಾವಣೆಗಳಿಗೆ ಹೊರಗಿನಿಂದ ಯಾವ ವಾಹನಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳ ಮುಖ್ಯ ದ್ವಾರದಲ್ಲಿ ಮರದ ದಿಮ್ಮಿಗಳನ್ನಿಟ್ಟು ರಸ್ತೆ ಬಂದ್ ಮಾಡಿದ್ದಾರೆ.

ಕೊರೊನಾ ಕರ್ಫ್ಯೂ ಜಾರಿ ಹಿನ್ನೆಲೆ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳು ಹಾಗೂ ಜನರನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಿವೈಎಸ್​​ಪಿ ಕಚೇರಿ ಬಳಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದರು. ಇದರಿಂದ ಆಸ್ಪತ್ರೆಗಳು, ಕಚೇರಿಗಳು, ಬ್ಯಾಂಕ್‌ಗಳಿಗೆ ತೆರಳುತ್ತಿದ್ದ ಜನರು ಹಾಗೂ ವಾಹನ ಸವಾರರು ಅನಿವಾರ್ಯವಾಗಿ ಕೋರ್ಟ್ ರಸ್ತೆ ಮೂಲಕ ಸಾಗಿ ಬಾಬು ಜಗಜೀವನ್‌ರಾಮ್​​​ ಬಡಾವಣೆಯ ಮೂಲಕ ಬಸವೇಶ್ವರ ಚಿತ್ರಮಂದಿರದ ಬಳಿ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ತೆರಳುತ್ತಿದ್ದರು.

ಇದರಿಂದ ಬಡಾವಣೆಯಲ್ಲಿ ಕಾರುಗಳು, ಬೈಕ್‌ಗಳು ಹಾಗೂ ಜನರ ಓಡಾಟ ಹೆಚ್ಚಾಯಿತು. ಭಯದಿಂದ ಇಲ್ಲಿನ ನಿವಾಸಿಗಳು ಬಡಾವಣೆಯ ಒಳಗೆ ಯಾವುದೇ ವಾಹನಗಳು ಬಾರದಂತೆ ತಡೆಯುವ ಸಲುವಾಗಿ ಬಸವೇಶ್ವರ ಚಿತ್ರಮಂದಿರದ ಬಳಿ ಮುಖ್ಯ ದ್ವಾರಗಳಲ್ಲಿ ಮರದ ದಿಮ್ಮಿಗಳು ಹಾಗೂ ಫ್ಲೆಕ್ಸ್​ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಬಂದ್ ಮಾಡಿದ್ದಾರೆ.

ಮಾಸ್ಕ್ ಧರಿಸದಿದ್ದರೆ ದಂಡ

ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಮುಖಂಡರು ಸಭೆ ಸೇರಿ ಗ್ರಾಮದ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಇಲ್ಲದಿದ್ದಲ್ಲಿ 500 ರೂ. ದಂಡ, ಗುಳೇ ಹೋದವರು ಹಿಂತಿರುಗುವವರು ಕೋವಿಡ್ ನೆಗೆಟಿವ್ ಟೆಸ್ಟ್ ಕಡ್ಡಾಯ ಮಾಡಿದ್ದಾರೆ. ಬೇರೆ ಊರಿನವರು ವ್ಯಾಪಾರ ಮಾಡಲು ಬಂದರೆ, ಮೈಕ್ರೋ ಫೈನಾನ್ಸ್ ನವರು ಬಂದರೇ 1000 ರೂ. ದಂಡ ಕಟ್ಟಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಕ್ಕೆ ಮುಳ್ಳಿನ ಬೇಲಿ

ಚಾಮರಾಜನಗರ ತಾಲೂಕಿನ ರಂಗಸಂದ್ರ ಗ್ರಾಮದ ಸುತ್ತ 7-8 ಕಡೆ ಮುಳ್ಳಿನ ಬೇಲಿಗಳನ್ನು ಹಾಕಿಕೊಂಡು ಬೇರೆ ಗ್ರಾಮದವರು ತಮ್ಮ ಊರಿಗೆ ಬರದಂತೆ ನಿರ್ಬಂಧ ವಿಧಿಸಿದ್ದಾರೆ. ಅಕ್ಕಪಕ್ಕದ ಊರುಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಗ್ರಾಮಸ್ಥರು ಮುಳ್ಳಿನ ಬೇಲಿ ಹಾಕಿಕೊಂಡಿದ್ದು, ಅನಿವಾರ್ಯ ಕಾರಣಗಳಿದ್ದರೇ ಮಾತ್ರ ಗ್ರಾಮದಿಂದ ಹೊರಗಡೆ ಹೋಗಬೇಕು ಮತ್ತು ಬೇರೆ ಊರಿನವರಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ‌.

ಕೆಲ ಗ್ರಾಮಗಳಲ್ಲಿ ಕೊರೊನಾ ಸೋಂಕು ಕಂಡುಬಂದ ಕುಟುಂಬಗಳು ಮನೆಯಲ್ಲೇ ಇರಬೇಕು. ಸೋಂಕಿತರ ಸಂಪರ್ಕಿತರು ಊರಿನಲ್ಲಿ ಓಡಾಡಿದರೇ 1,2, 5 ಸಾವಿರ ರೂ. ದಂಡ ವಿಧಿಸುವ ನಿಯಮ ಜಾರಿ ಮಾಡಿದ್ದಾರೆ.

ABOUT THE AUTHOR

...view details