ಕರ್ನಾಟಕ

karnataka

ETV Bharat / state

ಚಾಮರಾಜನಗರ 2023: ಮೋದಿ ಸಫಾರಿ, ಕಾಂಗ್ರೆಸ್ ಜಯಭೇರಿ; ಹುಲಿ-ಆನೆಗಳ ಬೀಡಾದ ಗಡಿಜಿಲ್ಲೆ

2023ರಲ್ಲಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದ ಪ್ರಮುಖ ಘಟನೆಗಳ ಹಿನ್ನೋಟ ಇಲ್ಲಿದೆ.

By ETV Bharat Karnataka Team

Published : Dec 30, 2023, 10:48 PM IST

Etv Bharatthese-years-major-incidents-in-chamarajanagar-district
ಚಾಮರಾಜನಗರ 2023: ಮೋದಿ ಸಫಾರಿ, ಕಾಂಗ್ರೆಸ್ ಜಯಭೇರಿ, ಹುಲಿ-ಆನೆಗಳ ಬೀಡಾದ ಗಡಿಜಿಲ್ಲೆ

ಚಾಮರಾಜನಗರ: 2023ರ ವರ್ಷ ಗಡಿ ಜಿಲ್ಲೆಯಲ್ಲಿ ರಾಜಕೀಯ ಪಲ್ಲಟಗಳು, ಪ್ರಧಾನಿ ಭೇಟಿ, ಹುಲಿ, ಆನೆಗಳ‌ ಸಂಖ್ಯೆಯಲ್ಲಿ ಚಾಮರಾಜನಗರ ಮೊದಲ ಸ್ಥಾನ ಪಡೆದಿರುವುದು ಸೇರಿದಂತೆ ಹಲವು ಮಹತ್ವದ ಸಂಗತಿಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ.

ಪ್ರಧಾನಿ ಮೋದಿ‌ ಸಫಾರಿ: ಭಾರತದ ಜನಪ್ರಿಯ ರಕ್ಷಿತಾರಣ್ಯಗಳಲ್ಲಿ‌ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ನಡೆಸುವ ಮೂಲಕ ಬಂಡೀಪುರಕ್ಕೆ ಹೊಸ ಮೆರುಗನ್ನು ತಂದುಕೊಟ್ಟರು. ಏ.9 ರಂದು ವಿಶೇಷ ಹೆಲಿಕಾಪ್ಟರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಆಗಮಿಸಿ, ಟೈಗರ್ ರಿಸರ್ವ್ ಲೋಗೋ ಇರುವ ಜಾಕೆಟ್, ಅರಣ್ಯ ಇಲಾಖೆ ಯೂನಿಫಾರ್ಮ್ ಹೋಲುವ ಟೀ ಶರ್ಟ್​​ ಧರಿಸಿ ಮಿಂಚಿದ್ದರು. ಒಂದೂವರೆ ತಾಸು ಬಂಡೀಪುರ ಕಾಡಲ್ಲಿ ಸಫಾರಿ ನಡೆಸಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದರು.

ಬಂಡೀಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ

ಕಾಂಗ್ರೆಸ್ ಜಯಭೇರಿ:ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಹಾಗೂ ಕೊಳ್ಳೇಗಾಲ ಪೈಕಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಿದರೇ ಹನೂರಿನಲ್ಲಿ ಜೆಡಿಎಸ್​ನ ಎಂ.ಆರ್. ಮಂಜುನಾಥ್ ಗೆದ್ದು ಬೀಗಿದ್ದರು. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗಣೇಶ್ ಪ್ರಸಾದ್‌, ಹನೂರಿನಲ್ಲಿ ಮಂಜುನಾಥ್ ಮೊದಲ ಬಾರಿ ಶಾಸಕರಾದರೇ, ಚಾಮರಾಜನಗರದಲ್ಲಿ ಬಿಜೆಪಿ ಪ್ರಬಲ ನಾಯಕ ಸೋಮಣ್ಣ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ಸಿ. ಪುಟ್ಟರಂಗಶೆಟ್ಟಿ ಸತತ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಕೊಳ್ಳೇಗಾಲ ಕ್ಷೇತ್ರದಿಂದ ಎ.ಆರ್‌. ಕೃಷ್ಣಮೂರ್ತಿ 19 ವರ್ಷದ ಬಳಿಕ ಶಾಸಕರಾದರು.

ಬಿಜೆಪಿಯ ಚುನಾವಣೆ ಪ್ರಚಾರ

ಅಮಿತ್ ಶಾ, ರಾಗಾ, ನಡ್ಡಾ, ಪ್ರಿಯಾಂಕಾ ಪ್ರಚಾರದ ರಂಗು:2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ರಂಗು ಜೋರಾಗಿತ್ತು.‌ ಚುನಾವಣೆ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಮಲೆ ಮಹದೇಶ್ವರ ಬೆಟ್ಟದಿಂದ ಚಾಲನೆ ಕೊಟ್ಟರು. ಇನ್ನು, ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ, ನಟ ಸುದೀಪ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜಿಲ್ಲೆಗೆ ಭೇಟಿ ಕೊಟ್ಟು ಅಬ್ಬರದ ಪ್ರಚಾರ ನಡೆಸಿದ್ದರು.

ಚುನಾವಣೆ ಪ್ರಚಾರದಲ್ಲಿ ರಾಹುಲ್​ ಗಾಂಧಿ
ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಿಯಾಂಕಾ ಗಾಂಧಿ

ಮಾಜಿ ಸಂಸದ ಧ್ರುವನಾರಾಯಣ ನಿಧನ:ರಾಜಕೀಯದಲ್ಲಿ ತಮ್ಮದೇ ಛಾಪು‌ ಮೂಡಿಸಿದ್ದ, ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದತ್ತ ಹೊರಳಿದ್ದ ಆರ್. ಧ್ರುವನಾರಾಯಣ ಅಕಾಲಿಕವಾಗಿ ನಿಧನ ಹೊಂದಿದರು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದ ಹೊತ್ತಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಓರ್ವ ಉತ್ತಮ ಸಂಘಟನಾ ಚತುರನನ್ನು ಕಳೆದುಕೊಂಡಿತು. ಸದ್ಯ, ಧ್ರುವನಾರಾಯಣ ಪುತ್ರ ದರ್ಶನ್ ಜನರ ಒತ್ತಾಯಕ್ಕೆ ಮಣಿದು ನಂಜನಗೂಡಿನಲ್ಲಿ ಸ್ಪರ್ಧೆ ಮಾಡಿ ಶಾಸಕರಾಗಿದ್ದಾರೆ.

ಚಿತ್ರನಟ ಗಣೇಶ್ ಕಟ್ಟಡ ವಿವಾದ: ಗುಂಡ್ಲುಪೇಟೆ ತಾಲೂಕಿನ‌ ಜಕ್ಕಹಳ್ಳಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡಕ್ಕೆ ಅಡಿಪಾಯ ಹಾಕಿದ್ದಾರೆ ಎಂಬ ವಿವಾದಕ್ಕೆ ಚಿತ್ರನಟ ಗಣೇಶ್ ಗುರಿಯಾಗಿದ್ದರು. ಪರಿಸರವಾದಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ನಟ ಗಣೇಶ್​ ಅವರಿಗೆ ಬಂಡೀಪುರ ಸೂಕ್ಷ್ಮ ವಲಯ ಪರಿಸರ ಸಮಿತಿ ಸದಸ್ಯ ಕಾರ್ಯದರ್ಶಿ ನೋಟಿಸ್​ ನೀಡಿದ್ದರು. ಬಳಿಕ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹುಲಿ-ಆನೆಗಳ ಬೀಡಾದ ಗಡಿಜಿಲ್ಲೆ: 2023 ರಲ್ಲಿ ಹುಲಿ ಹಾಗೂ ಆನೆ ಗಣತಿ ವರದಿ ಬಿಡುಗಡೆಯಾಯಿತು. ಅತ್ಯಧಿಕ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಹುಲಿ ಮತ್ತು ಆನೆಗಳ ಸಂತತಿ ಇರುವುದು ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕಾವೇರಿ ಕಿಚ್ಚು- ಬರಪಟ್ಟಿಗೆ ಗಡಿಜಿಲ್ಲೆ:ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ಖಂಡಿಸಿ ರೈತ ಸಂಘ, ಕನ್ನಡಪರ ಹೋರಾಟಗಾರರು ಬೀದಿಗಿಳಿದು ಆಕ್ರೋಶ ಹೊರಹಾಕಿದರು‌. ಕಾವೇರಿ ಕಿಚ್ಚು ಹೊರಹಾಕಲು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಚಾಮರಾಜನಗರ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿ ಬಂದ್​ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಕನ್ನಡಪರ ಹೋರಾಟಗಾರರು ನಿರಂತರವಾಗಿ 117 ದಿನ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರದ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳನ್ನು ಸರ್ಕಾರ ಬರಪಟ್ಟಿಗೆ ಸೇರಿಸಿದೆ. ಬಿಜೆಪಿಯೂ ಕೂಡ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ಕೊಟ್ಟು ಬರ ಅಧ್ಯಯನ ನಡೆಸಿತು.

ಇದನ್ನೂ ಓದಿ:2023ರಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ

ABOUT THE AUTHOR

...view details