ಕರ್ನಾಟಕ

karnataka

ಕೊನೆಯ ಕಾರ್ತಿಕ ಸೋಮವಾರ: ಮಳೆಯ ನಡುವೆಯೂ ಭಕ್ತರಿಂದ ಮಾದಪ್ಪನ ದರ್ಶನ

By

Published : Nov 29, 2021, 3:25 PM IST

ಕೋವಿಡ್ ಹಿನ್ನೆಲೆ ಕಳೆದ ವರ್ಷ ಸರಳವಾಗಿ ನೆರವೇರಿದ್ದ ಮಲೆ ಮಹದೇಶ್ವರನ ಜಾತ್ರಾ ಸಂಭ್ರಮ ಈ ಬಾರಿ ಕೋವಿಡ್​ ನಿಯಮಾವಳಿಯ ಜೊತೆಗೆ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು ಕೊನೆಯ ಕಾರ್ತಿಕ ಸೋಮವಾರವಾಗಿದ್ದು, ಈ ಹಿನ್ನೆಲೆ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿದೆ.

special-pooja-performed-at-male-mahadeshwara-temple-for-kartika-purnima
ಸಾವಿರಾರು ಭಕ್ತರಿಂದ ಮಾದಪ್ಪನ ದರ್ಶನ

ಚಾಮರಾಜನಗರ: ಇಂದು ಕೊನೆಯ ಕಾರ್ತಿಕ ಸೋಮವಾರ ಹಿನ್ನೆಲೆ ಪ್ರಸಿದ್ಧ ಯಾತ್ರಾಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಇಂದು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ತೆಪ್ಪೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಉಳಿದಂತೆ ದೀಪದಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಬೆಳಗುವ ಕಾರ್ಯಕ್ರಮ ಮಾತ್ರ ನಡೆಸಲು ನಿರ್ಧರಿಸಲಾಗಿದೆ.

ಕಾರ್ತಿಕ ಮಾಸದಲ್ಲಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆಯುತ್ತಾರೆ. ಕೋವಿಡ್‌ ಕಾರಣಕ್ಕೆ ಕಳೆದ ವರ್ಷ ಜಾತ್ರೆ ಸರಳವಾಗಿ ನಡೆದಿತ್ತು. ದಸರಾ ಬಳಿಕ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಾರ್ತಿಕ ಸೋಮವಾರವಾದ ಇಂದು ಭಕ್ತರ ದಂಡು ಹರಿದುಬಂದಿದೆ.

ಕೊನೆಯ ಕಾರ್ತಿಕ ಸೋಮವಾರ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ

ಕಾರ್ತಿಕ ಮಾಸದ ವಿಶೇಷ ಪೂಜೆ ಹಾಗೂ ದೀಪೋತ್ಸವಕ್ಕಾಗಿ ಪ್ರಾಧಿಕಾರವು ವಿಶೇಷ ಸಿದ್ಧತೆ ಮಾಡಿದೆ. ದೇವಾಲಯಕ್ಕೆ ವಿದ್ಯುತ್‌ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ. ಭಕ್ತರಿಗಾಗಿ 1.5 ಲಕ್ಷ ಲಾಡು ಸಿದ್ಧಪಡಿಸಲಾಗಿದೆ.

ಬೆಟ್ಟದ ಮೇಲೆ ಬೆಳಗಿತ್ತು ಮಹಾಜ್ಯೋತಿ

ಈ ಬೆಟ್ಟದ ಪ್ರಸಿದ್ಧಿಯ ಹಿಂದೆ ಪುರಾಣ ಕಥೆಯೊಂದಿದೆ. ಮಹದೇಶ್ವರರು ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ಬಂದು ಐಕ್ಯವಾಗಲು ಸ್ಥಳವನ್ನು ಹುಡುಕುತ್ತಾರೆ. ಬೆಟ್ಟಗುಡ್ಡಗಳೆಲ್ಲವೂ ಕತ್ತಲುಮಯವಾಗಿದ್ದರಿಂದ ಒಡ್ಡಿನಲ್ಲಿ ತಮ್ಮ ಪವಾಡದಿಂದ ಜ್ಯೋತಿ ಬೆಳಗಿಸುತ್ತಾರೆ. ಈ ಜ್ಯೋತಿಯೇ ಮುಂದೆ ಬೆಟ್ಟದಲ್ಲಿನ ಗ್ರಾಮಸ್ಥರ ಮನೆ ಮನೆಗಳಲ್ಲಿ ಪ್ರಕಾಶಿಸುವಂತಾಗುತ್ತದೆ.

ದೀಪಾವಳಿ ಮುಗಿದ ಬಳಿಕ ಬರುವಂತಹ ನಾಲ್ಕು ಕಾರ್ತಿಕ ಸೋಮವಾರದಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಕೊನೆಯ ಕಾರ್ತಿಕ ಸೋಮವಾರದಂದು ದೀಪದಗಿರಿ ಒಡ್ಡಿನಲ್ಲಿ ಮಹಾಜ್ಯೋತಿ ಬೆಳಗಿಸಲಾಗುತ್ತದೆ. ಈ ಜ್ಯೋತಿಯನ್ನು ಕಂಡು ಸ್ವಾಮಿಯ ಆಶೀರ್ವಾದ ಪಡೆದರೆ ತಮ್ಮೆಲ್ಲ ಕಷ್ಟಗಳು ಬೆಂಕಿಯಂತೆ ಉರಿದುಹೋಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ.

ಇದನ್ನೂ ಓದಿ:ಕುಣಿಗಲ್​ನಲ್ಲಿ ಜಲಾಶಯ ನೋಡಲು ಹೋಗಿದ್ದ ಇಬ್ಬರು ನೀರು ಪಾಲು

ABOUT THE AUTHOR

...view details