ಕರ್ನಾಟಕ

karnataka

ETV Bharat / state

11 ವರ್ಷಗಳ ಬಳಿಕ ಮೈದುಂಬಿದ ಸುವರ್ಣಾವತಿ: 900 ಕ್ಯೂಸೆಕ್ ನೀರು ಬಿಡುಗಡೆ - ಚಿಕ್ಕಹೊಳೆ ಜಲಾಶಯ

ಚಾಮರಾಜನಗರ ಜಿಲ್ಲೆಯ ಅವಳಿ ಜಲಾಶಯಗಳೆಂದೇ ಕರೆಯಲಾಗುವ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇಂದು 2 ಕ್ರಸ್ಟ್ ಗೇಟ್​ಗಳ ಮೂಲಕ ಸುವರ್ಣಾವತಿ ಜಲಾಶಯ (Suvarnavathi reservoir) ದಿಂದ 900 ಕ್ಯೂಸೆಕ್ ಗೂ ಅಧಿಕ ನೀರನ್ನು ಹೊರ ಬಿಡಲಾಗುತ್ತಿದೆ.

Suvarnavathi reservoir
ಚಾಮರಾಜನಗರದ ಸುವರ್ಣಾವತಿ ಜಲಾಶಯ

By

Published : Nov 14, 2021, 12:35 PM IST

ಚಾಮರಾಜನಗರ: ತಮಿಳುನಾಡಿನ ದಿಂಬಂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಜಿಲ್ಲೆಯ ಸುವರ್ಣಾವತಿ ಜಲಾಶಯ (Suvarnavathi Reservoir) ಉಕ್ಕಿ ಹರಿಯುತ್ತಿದ್ದು, 2 ಕ್ರಸ್ಟ್ ಗೇಟ್​ಗಳ ಮೂಲಕ 900 ಕ್ಯೂಸೆಕ್ ಗೂ ಅಧಿಕ ನೀರನ್ನು ಹೊರ ಬಿಡಲಾಗುತ್ತಿದೆ.

ಜಿಲ್ಲೆಯ ಅವಳಿ ಜಲಾಶಯಗಳೆಂದೇ ಕರೆಯಲಾಗುವ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು (Chikkahole Reservoir) ತಮಿಳುನಾಡಿನ ಮಹಾಮಳೆಯಿಂದ ಮೈದುಂಬಿವೆ. ಸುವರ್ಣಾವತಿ ಜಲಾಶಯದಲ್ಲಿ 11 ವರ್ಷದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಹರಿ ಬಿಡಲಾಗುತ್ತಿದೆ. 2010 ರಲ್ಲಿ ಒಳಹರಿವು ಹೆಚ್ಚಾಗಿ ನೀರನ್ನು ಹರಿಬಿಟ್ಟಿದ್ದು ಹೊರತುಪಡಿಸಿದರೆ, ಬಳಿಕ ತಕ್ಕಮಟ್ಟಿಗಷ್ಟೇ ಅವಳಿ ಜಲಾಶಯಗಳು ತುಂಬುತ್ತಿದ್ದವು‌. ಆದರೆ, ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಜೀವಕಳೆ ಬಂದಂತಾಗಿದೆ.

ಚಾಮರಾಜನಗರದ ಸುವರ್ಣಾವತಿ ಜಲಾಶಯ

ಜನರಿಗೆ ಎಚ್ಚರಿಕೆ:

ಸುವರ್ಣಾವತಿ ಹೊರಹರಿವು ಹೆಚ್ಚಾಗಿರುವ ಕುರಿತು ನೀರಾವರಿ ಇಲಾಖೆ ಅಧಿಕಾರಿ ಮಹಾದೇವಸ್ವಾಮಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಸುವರ್ಣಾವತಿ ಜಲಾಶಯವು ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ 900 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಅಚ್ಚುಕಟ್ಟು ಪ್ರದೇಶ ಹಾಗೂ ನದಿ ಪಾತ್ರದ ಜನರು, ರೈತರು ಮುನ್ನೆಚ್ಚರಿಕೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ, ಜಾನುವಾರುಗಳ ಬಗ್ಗೆ ನಿಗಾ ವಹಿಸಬೇಕೆಂದು ಮನವಿ ಮಾಡಿದ್ದಾರೆ‌.

ಪ್ರವಾಸಿ ತಾಣವೂ ಹೌದು:

ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಚಾಮರಾಜನಗರದಿಂದ ತಮಿಳುನಾಡಿನ ಸತ್ಯಮಂಗಲಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಇವೆ. ನಗರದಿಂದ 15 ಕಿ.ಮೀ. ಸಾಗಿದ್ರೆ ಎರಡೂ ಜಲಾಶಯಗಳು ಎದುರುಗೊಳ್ಳುತ್ತವೆ. ಸದ್ಯಕ್ಕೆ ನೀರಿನ ಮಟ್ಟ ಏರಿಕೆಯಾಗಿರುವ ಕಾರಣ ಜಿಲ್ಲೆಯ ನಾನಾ ಭಾಗ ಹಾಗೂ ಹೊರ ಜಿಲ್ಲೆಯಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಅಲ್ಲದೇ, ತಮಿಳುನಾಡಿಗೆ ತೆರಳುತ್ತಿರುವ ಪ್ರವಾಸಿಗರು ಸಹ ಈ ಜಲಾಶಯಕ್ಕೆ ಭೇಟಿ ನೀಡಿ, ಸ್ವಲ್ಪ ಸಮಯ ಕಳೆದು ತೆರಳುತ್ತಾರೆ.

ABOUT THE AUTHOR

...view details