ಚಾಮರಾಜನಗರ: ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಇಂದು ಚಾಮರಾಜನಗರದಲ್ಲಿ ಜೋರು ಮಳೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದರು. ಬಿಜೆಪಿಗರಿಗೆ 40 ಎಂಬ ಸಂಖ್ಯೆ ಮೇಲೆ ಬಲು ಪ್ರೀತಿ, 40 ಅಂದರೆ ಇಷ್ಟ ಆದ್ದರಿಂದ ಅವರಿಗೆ ಈ ಚುನಾವಣೆಯಲ್ಲಿ 40 ಸ್ಥಾನಗಳನ್ನು ಮಾತ್ರ ಕೊಡಿ, ನಮಗೆ 150 ಸ್ಥಾನ ಕೊಡಿ, ಅಲ್ಪ ಬಹುಮತದ ಸರ್ಕಾರ ಬಂದರೆ 40 ಪರ್ಸೆಂಟ್ ಹಣದಿಂದ ಕಳ್ಳತನದಿಂದ ಅಧಿಕಾರ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಚುನಾವಣೆಯಲ್ಲ, ಕರ್ನಾಟಕದ ಯುವ ಸಮುದಾಯ, ಮಕ್ಕಳು, ಮಹಿಳೆಯರು, ರೈತರ ಚುನಾವಣೆ. 40 ಪರ್ಸೆಂಟ್ ಬಗ್ಗೆ ಇದುವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಕಾರ ಎತ್ತಿಲ್ಲ, ಯಾವುದೇ ತನಿಖೆ ಕೂಡ ಆಗಿಲ್ಲ, ಕರ್ನಾಟಕ ಜನರಿಗೆ 40 ಪರ್ಸೆಂಟ್ ಸರ್ಕಾರದ ಬಗ್ಗೆ ತಿಳಿಯಲಿ, ಇದರ ಬಗ್ಗೆಯೂ ಮಾತನಾಡಿ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
ಮೋದಿ ತಮ್ಮ ಬಗ್ಗೆ ಮಾತನಾಡುವುದು ಬಿಡುವುದಿಲ್ಲ:ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ಅವರ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ, ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಜನರ ಬಗ್ಗೆ ಮಾತಾಡುವುದನ್ನು ಆರಂಭಿಸಿ. ಚುನಾವಣಾ ಅರ್ಧ ಪ್ರಚಾರ ಮುಗಿಯುತ್ತಿದೆ, ಈಗಲಾದರೂ ಕರ್ನಾಟಕದ ಬಗ್ಗೆ ಮಾತನಾಡಿ ಎಂದು ವಾಗ್ದಾಳಿ ನಡೆಸಿದರು. ನಾನು ನಮ್ಮ ಪಕ್ಷದ ಎಲ್ಲಾ ನಾಯಕರನ್ನು ಗೌರವಿಸುತ್ತೇನೆ, ಆದರಿಸುತ್ತೇನೆ. ಮೋದಿ ಅವರೇ ನೀವೇಕೆ ನಿಮ್ಮ ಪಕ್ಷದ ನಾಯಕರಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹೆಸರನ್ನೂ ಏಕೆ ತೆಗೆದುಕೊಳ್ಳುವುದಿಲ್ಲ, 40 ಪರ್ಸೆಂಟ್ ಪರಿಣಾಮ, ನಿಮ್ಮ ನಾಯಕರು ಎಷ್ಟು ಭ್ರಷ್ಟರು ಅದಕ್ಕಾ..? ಎಂದು ಪ್ರಶ್ನಿಸಿದರು.