ಚಾಮರಾಜನಗರ: ಗುಂಡ್ಲುಪೇಟೆ ಮಡಹಳ್ಳಿ ಕ್ವಾರಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಕ್ಕೆ NDRF, SDRF ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಹಾಸ ಪಡುತ್ತಿದ್ದು, ಕ್ವಾರಿಯ ಗುಡ್ಡ ಮತ್ತೆ ಕುಸಿಯುವ ಭೀತಿಯಲ್ಲಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ.
ಈ ಕುರಿತು, ಮೈಸೂರು ಅಗ್ನಿಶಾಮಕ ದಳ ಮುಖ್ಯಾಧಿಕಾರಿ ಜಯರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿ, ಶುಕ್ರವಾರ ಎರಡನೇ ಬಾರಿ ಕ್ವಾರಿ ಕುಸಿದಿದ್ದು, ಈಗಲೂ ಕುಸಿಯುವ ಹಂತದಲ್ಲಿದೆ. ಎರಡು ವಿಭಿನ್ನ ಪದರದ ಕಲ್ಲುಗಳಿರುವುದರಿಂದು ಜಾರುತ್ತಿದ್ದು, ಕ್ಷಿಪ್ರ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ತಿಳಿಸಿದರು.
ಈಗಾಗಲೇ ಒಂದು ಶವವನ್ನು ಮೇಲಕ್ಕೆತ್ತಿದ್ದು, ಎರಡು ಹಿಟಾಚಿಗಳಲ್ಲಿ ಇಬ್ಬರು ಆಪರೇಟರ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಒಬ್ಬರ ಕೈ ಹಾಗೂ ಇನ್ನೊಬ್ಬರ ಕಾಲು ಕಾಣುತ್ತಿದ್ದು ವಾಸನೆ ಬರುತ್ತಿದೆ. ಅವರು ಮೃತಪಟ್ಟಿರುವ ಸಾಧ್ಯತೆ ದಟ್ಟವಾಗಿದೆ. ಕಲ್ಲನ್ನು ಜೋರಾಗಿ ಜರುಗಿಸಿದರೇ ಕುಸಿಯುವ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿದೆ. ವೈಬ್ರೇಷನ್ ಉಂಟಾಗದಂತೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ರಕ್ಷಣಾ ಸಿಬ್ಬಂದಿಯ ಜೀವವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯ ಕೈಗೊಳ್ಳಬೇಕಿದೆ ಎಂದರು.