ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಕಳಪೆ ತೊಗರಿ ಬೇಳೆ ಜಿಲ್ಲೆಗೆ ಬರುತ್ತಿರುವ ಆರೋಪ ಕೇಳಿಬಂದಿದ್ದು ಗ್ರಾಹಕರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಲಾಕ್ಡೌನ್ ಅವಧಿಯಲ್ಲೂ ಹುಳು ಹಿಡಿದ ತೊಗರಿ ಬೇಳೆ ಬಂದಿದ್ದು, ಗಮನಕ್ಕೆ ಬಂದ ಕೂಡಲೇ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎನ್.ಗೋಪಾಲಯ್ಯ ಕಳಪೆ ಬೇಳೆಯನ್ನು ವಾಪಸ್ ಕಳುಹಿಸಿ ಗುಣಮಟ್ಟದ ಪಡಿತರ ಪೂರೈಕೆಗೆ ಕ್ರಮ ಕೈಗೊಂಡಿದ್ದರು. ಆದರೆ, ಮತ್ತೆ ಈ ತಿಂಗಳು ಚಾಮರಾಜನಗರ ಜಿಲ್ಲಾಕೇಂದ್ರ ವ್ಯಾಪ್ತಿಯಲ್ಲಿ ಕಳಪೆ ತೊಗರಿ ಬೇಳೆ ಪೂರೈಕೆಯಾಗಿದೆ.
ಹುಳು ಹಿಡಿದ, ಸಿಪ್ಪೆ ತೆಗೆಯಗಿರುವ ಹಾಗೂ ತೂತು ಬಿದ್ದಿರುವ ತೊಗರಿ ವಿತರಣೆ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದಲೂ ಇದೇ ರೀತಿಯಾಗಿದೆ. ಸರ್ಕಾರ ನಮಗೆ ಉಚಿತವಾಗಿ ಕೊಡುತ್ತಿದೆ. ಆದರೆ, ಸರ್ಕಾರವೇನೂ ಪುಕ್ಕಟೆಯಾಗಿ ಖರೀದಿಸುತ್ತಿಲ್ಲ. ನಮಗೆ ನೀಡುತ್ತಿರುವ ಬೇಳೆ ಅಂಗಡಿಯಲ್ಲಿ ಕೆಜಿಗೆ 30-40 ರೂ.ಗೆ ಸಿಗುತ್ತಿದೆ ಎಂದು ನಾಯಕರ ಬೀದಿಯ ಸ್ವಾಮಿ ಆಕ್ರೋಶ ಹೊರಹಾಕಿದರು.