ಚಾಮರಾಜನಗರ: ಕೋವಿಡ್ ಕಾರಣ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ 13ರಂದು ನಡೆಯಬೇಕಿದ್ದ ಯುಗಾದಿ ರಥೋತ್ಸವ ರದ್ದಾಗಿದೆ.
ಈ ಕುರಿತು ಮ.ಮ.ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದು, ಯುಗಾದಿ ಜಾತ್ರಾ ಮಹೋತ್ಸವವನ್ನು ಕೋವಿಡ್-19 ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು 500 ಜನರಿಗೆ ಸೀಮಿತವಾಗಿ ಸಂಪ್ರದಾಯದಂತೆ ಸರಳವಾಗಿ ಆಚರಣೆ ಮಾಡಲು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅನುಮತಿ ನೀಡಿದ್ದರು.
ಆದರೆ ರಥೋತ್ಸವ ಸಂದರ್ಭದಲ್ಲಿ 30 ಅರ್ಚಕರು, ಕಳಸ ಹೊತ್ತ 108 ಹೆಣ್ಣು ಮಕ್ಕಳು, ಕುಟುಂಬಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಸೇರಿದಂತೆ ಸುಮಾರು 2 ರಿಂದ 3 ಸಾವಿರ ಜನ ಸೇರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಥೋತ್ಸವವನ್ನು ರದ್ದು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಭೂಮಿ ಅತಿಕ್ರಮ - ರಾಜ್ಯದಲ್ಲಿವೆ ಹಲವು ಪ್ರಕರಣಗಳು!
ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾದಾಗಿನಿಂದ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ರದ್ದು ಮಾಡಿರಲಿಲ್ಲ. ಕಳೆದ ವರ್ಷ ಲಾಕ್ಡೌನ್ ವೇಳೆ ಯುಗಾದಿ ರಥೋತ್ಸವ ರದ್ದಾಗಿತ್ತು. ಈ ಬಾರಿ ರಥೋತ್ಸವಕ್ಕೆ ಅವಕಾಶ ನೀಡಿದ್ದರೂ ಸಹ ಸ್ಥಳೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಎರಡನೇ ಬಾರಿ ಯುಗಾದಿ ರಥೋತ್ಸವ ರದ್ದಾಗಿದೆ.