ಚಾಮರಾಜನಗರ: ಶ್ರೀಲಂಕಾದ ವಿಶ್ವ ವಿಖ್ಯಾತ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಕೈಗಾರಿಕೋದ್ಯಮಿಯಾಗುತ್ತಿದ್ದಾರೆ. ತಮ್ಮ ಉದ್ಯಮವನ್ನು ಕರ್ನಾಟಕದ ಚಾಮರಾಜನಗರದಲ್ಲಿ ಆರಂಭಿಸುತ್ತಿದ್ದಾರೆ.
ಗಡಿಜಿಲ್ಲೆ ಚಾಮರಾಜನಗರದ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಾಫ್ಟ್ ಡ್ರಿಂಕ್ ಕಾರ್ಖಾನೆಯನ್ನು ಆರಂಭಿಸುತ್ತಿದ್ದು, 46 ಎಕರೆ ಪ್ರದೇಶವನ್ನು ಖರೀದಿಸಿದ್ದಾರೆ. ಸರ್ಕಾರದಿಂದ ಪಡೆಯಬೇಕಾದ ಆಡಳಿತಾತ್ಮಕವಾದ ಎಲ್ಲಾ ಹಂತಗಳನ್ನೂ ಮುಗಿಸಿ ಕಾರ್ಖಾನೆಯ ನಿರ್ಮಾಣದ ಕಾರ್ಯ ಆರಂಭಿಸಿದ್ದಾರೆ. ಮುತ್ತಯ್ಯ ಬೆವರೇಜಸ್ ಹೆಸರಿನಲ್ಲಿ ಸಾಫ್ಟ್ ಡ್ರಿಂಕ್, ಕೂಲ್ ಡ್ರಿಂಕ್, ಸುವಾಸಿತ ಹಾಲನ್ನು ಕ್ಯಾನ್ಗಳಲ್ಲಿ ಮಾರಾಟ ಮಾಡಲಿದ್ದು ಚಾಮರಾಜನಗರದಲ್ಲಿ ಸಾಫ್ಟ್ ಡ್ರಿಂಕ್ ಹಾಗೂ ನಾನ್ ಆಲ್ಕೋಹಾಲಿಕ್ ಡ್ರಿಂಕ್ಗಳು ತಯಾರಾಗಲಿದೆ ಎಂದು ತಿಳಿದು ಬಂದಿದೆ.
ಆರಂಭಿಕ ಹಂತದಲ್ಲಿ 250 ಕೋಟಿಗೂ ಅಧಿಕ ಮೊತ್ತದ ಹಣವನ್ನು ಚಾಮರಾಜನಗರದಲ್ಲಿ ಹೂಡಿಕೆ ಮಾಡುತ್ತಿದ್ದು ಸ್ಥಳೀಯವಾಗಿ ನೂರಾರು ಮಂದಿಗೆ ನೌಕರಿ ಸಿಗಲಿದೆ. ಕ್ರಿಕೆಟಿಗ ಚಾಮರಾಜನಗರದಲ್ಲಿ ಕಾರ್ಖಾನೆ ಆರಂಭಿಸುವುದರಿಂದ ಮತ್ತಷ್ಟು ಕೈಗಾರಿಕೆಗಳನ್ನು ಸೆಳೆಯಲು ಅನುಕೂಲವಾಗಲಿದೆ. ಈಗಾಗಲೇ ಬಿರ್ಲಾ ಗ್ರೂಪಿನಿಂದ ಪರಿಸರಸ್ನೇಹಿ ಬಣ್ಣದ ಕಾರ್ಖಾನೆ ಕೂಡ ನಿರ್ಮಾಣವಾಗುತ್ತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಗುಂಡ್ಲುಪೇಟೆಯಲ್ಲಿ ಭೂಮಿ ಖರೀದಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೇ ಮುತ್ತಯ್ಯ ಕೈಗಾರಿಕೋದ್ಯಮಿಯಾಗಿ ಚಾಮರಾಜನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ಸಿಲೋನ್ ಬೆವರೇಜ್ ಕ್ಯಾನ್ (ಪ್ರೈ) ಲಿಮಿಟೆಡ್ನ ಸಹಯೋಗದಲ್ಲಿ ತಂಪು ಪಾನೀಯ ಉತ್ಪಾದನೆಯ ಬಗ್ಗೆ ವರದಿಯನ್ನು ಸಲ್ಲಿಸಿದರು. ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. 46.30 ಎಕರೆ ಭೂಮಿಯನ್ನು ಗುತ್ತಿಗೆ ಮಂಜೂರು ಮಾಡಿದ್ದಾರೆ.