ಚಾಮರಾಜನಗರ:ಚಾಮಾಜನಗರ ನಗರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ ಚಲಾಯಿಸಲು ಬರದಿದ್ದಕ್ಕೆ ಎಸ್ಡಿಪಿಐ ಕಿಡಿಕಾರಿದ್ದು, ಬಿಜೆಪಿಗೆ ಅವರು ಪರೋಕ್ಷ ಬೆಂಬಲ ಕೊಟ್ಟಿರುವ ಗುಮಾನಿಯಂತಿದೆ ಎಂದು ಆರೋಪಿಸಿದೆ.
ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕ ಪುಟ್ಟರಂಗಶೆಟ್ಟಿ ಪರೋಕ್ಷ ಬೆಂಬಲ: ಎಸ್ಡಿಪಿಐ ಆರೋಪ
ಶಾಸಕ ಪುಟ್ಟರಂಗಶೆಟ್ಟಿ ಅವರು ಮತ ಚಲಾಯಿಸಲು ಬರದೇ ಹಲವು ಪ್ರಶ್ನೆಗಳವು ಎದ್ದಿವೆ. ಈ ರೀತಿಯ ನಿಲುವು ತಾಳಿದ್ದಕ್ಕೆ ಶಾಸಕರು ಉತ್ತರ ಕೊಡಬೇಕಿದೆ ಎಂದು ಎಸ್ಡಿಪಿಐ ಮುಖಂಡ ಅಬ್ರಾರ್ ಅಹಮ್ಮದ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಮುಖಂಡ ಅಬ್ರಾರ್ ಅಹಮ್ಮದ್ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ಗೆ ಬೇಷರತ್ ಬೆಂಬಲ ನೀಡಿದ್ದೆವು. ದುರಂತವೆಂದರೆ, ಶಾಸಕ ಪುಟ್ಟರಂಗಶೆಟ್ಟಿ ಅವರೇ ಮತ ಚಲಾಯಿಸಲು ಬರದೇ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ರೀತಿಯ ನಿಲುವು ತಾಳಿದ್ದಕ್ಕೆ ಶಾಸಕರು ಉತ್ತರ ಕೊಡಬೇಕಿದೆ ಎಂದು ಅವರು ಆಗ್ರಹಿಸಿದರು.
ಜಾತ್ಯತೀತ ಸಿದ್ಧಾಂತ ಮತ್ತು ವಿಶ್ವಾಸಕ್ಕೆ ನಂಬಿಕೆದ್ರೋಹ ಬಗೆದಿರುವ ಪುಟ್ಟರಂಗಶೆಟ್ಟಿ ಅವರಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಅಧಿಕಾರ ಹಿಡಿದಿರುವ ಬಿಜೆಪಿ ಜನವಿರೋಧಿ ನೀತಿ ತಳೆದರೆ ಎಸ್ಡಿಪಿಐ ಹೋರಾಡಲಿದೆ ಎಂದು ಅವರು ಎಚ್ಚರಿಸಿದರು.