ಕೊಳ್ಳೇಗಾಲ: ತಾಲೂಕಿನಾದ್ಯಂತ ಮೈಕ್ರೋ ಫೈನಾನ್ಸ್ ನಡೆಸುವ ಐದು ಕಂಪನಿಗಳು ಬಡವರಿಗೆ ಕೊಟ್ಟಿರುವ ಸಾಲವನ್ನು ಮರುಪಾವತಿ ಮಾಡುವಂತೆ ಧಮ್ಕಿ ಹಾಕುತ್ತಿವೆ ಎಂಬ ದೂರು ಇಲ್ಲಿನ ಸ್ಥಳೀಯ ಮಹಿಳೆಯರಿಂದ ನನಗೆ ಬಂದಿದೆ ಎಂದು ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಸಾಲವಸೂಲಾತಿಗೆ ಒತ್ತಾಯ ಮಾಡಬಾರದು ಎಂಬ ಸರ್ಕಾರದ ನಿರ್ದೇಶನವಿದ್ದರೂ ಸಹ ಖಾಸಗಿ ಸಾಲ ನೀಡುವ ಕಂಪನಿಗಳು ಜನರನ್ನು ಪೀಡಿಸುತ್ತಿವೆ. ಕಟ್ಟದಿದ್ದರೆ ಅಧಿಕ ಬಡ್ಡಿ ಹಾಕಲಾಗುತ್ತದೆ ಎಂದು ಭಯಪಡಿಸುತ್ತಿವೆ ಎಂದು ತಿಳಿದು ಬಂದಿದೆ. ಭಾರತ್ ಫೈನಾನ್ಸ್, ಸೂರ್ಯೋದಯ, ಗ್ರಾಮೀಣ ಕೂಟ, ಗ್ರಾಮ ಶಕ್ತಿ, ಷೇರ್ ಫೈನಾನ್ಸ್ನಂತಹ ಕೆಲವು ಖಾಸಗಿ ಫೈನಾನ್ಸ್ ಕಂಪನಿಗಳು ಕೊರೊನಾ ಸಂಕಷ್ಟದಲ್ಲೂ ಸಾಲ ಪಡೆದಿರುವ ಬಡ ಜನರಿಗೆ ಹಣ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ ಇದ್ದರೂ ಬಲವಂತವಾಗಿ ಸಾಲ ವಸೂಲಾತಿಗೆ ಇಳಿದಿರುವುದು ಸರಿಯಲ್ಲ. ಈ ಪ್ರವೃತ್ತಿ ಹೀಗೆ ಮುಂದುವರೆದರೆ ಮೂಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.