ಚಾಮರಾಜನಗರ:ಸಿ. ಟಿ ರವಿ ಹಾಗೂ ಸಚಿವ ಈಶ್ವರಪ್ಪ ಆರ್ಎಸ್ಎಸ್ನ ಕೈಗೊಂಬೆಗಳು, ಅವರು ಹೇಳಿಕೊಟ್ಟಿದ್ದನ್ನು ಇವರು ಮಾತನಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದರು.
ಹಿಜಾಬ್ ವಿವಾದದ ಸಂಬಂಧ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಹೇಳಿಕೆಗಳಿಗೆ ಚಾಮರಾಜನಗರದಲ್ಲಿ ಅವರು ಪ್ರತಿಕ್ರಿಯಿಸಿದರು. ಈಶ್ವರಪ್ಪ ಅವರಿಗೆ ವಿಧ್ಯಾಭ್ಯಾಸನೂ ಇಲ್ಲ, ಮತ್ತೆ ಅವರಿಗೆ ಪ್ರಗತಿಪರ ಧೋರಣೆಯೂ ಇಲ್ಲ. ಹಿಂದುಳಿದ ನಾಯಕರಾಗಿದ್ದುಕೊಂಡು ಲೋಕಸಭಾ ಚುನಾವಣೆಯಲ್ಲಿ ಒಬ್ಬ ಹಿಂದುಳಿದ ವರ್ಗದವರಿಗೂ ಟಿಕೆಟ್ ಕೊಡಿಸಲಿಲ್ಲ. ಅವರಿಗೆ ನಾಚಿಕೆಯಾಗಬೇಕು. ವಿಧಾನಪರಿಷತ್ ಚುನಾವಣೆಯಲ್ಲಿ ಚಲಾವಣೆಗೊಂಡ ಮತ ಪರಿಗಣಿಸಿದಾಗ ಯಾರೂ ನಿರ್ನಾಮ ಆಗುತ್ತಿದ್ದಾರೆ ಎಂದು ಗೊತ್ತಾಗಲಿದೆ ಎಂದು ಈಶ್ವರಪ್ಪ ಹಾಗೂ ಸಿ.ಟಿ ರವಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಅಭಿವೃದ್ಧಿ ಕಾರಣದಿಂದಲ್ಲ. ಧರ್ಮ-ಧರ್ಮಗಳ ನಡುವೆ, ಜಾತಿಗಳ ನಡುವೆ ಕಂದಕ ನಿರ್ಮಾಣ ಮಾಡಿ ಅಧಿಕಾರ ಹಿಡಿದಿದ್ದಾರೆ. ಕೋಮು ದಳ್ಳುರಿ ಹಬ್ಬಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಗ್ಧ ಮನಸ್ಸಿನ ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ಉಂಟುಮಾಡಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದೆ ಎಂದು ಧ್ರುವ ನಾರಾಯಣ ಆರೋಪಿಸಿದರು.