ಕರ್ನಾಟಕ

karnataka

By

Published : Feb 14, 2020, 1:59 PM IST

Updated : Feb 14, 2020, 2:17 PM IST

ETV Bharat / state

ಈತ ವೀರಪ್ಪನ್ ಸಹಚರ - ಅವಳು ಕೊಲೆ ಅಪರಾಧಿ: ಪ್ರೀತಿಸಿ ಮದುವೆಯಾದ ಇಬ್ಬರ ಬದುಕು ಈಗ ಮಾದರಿ!

ಪೊಲೀಸ್ ಆಗಬೇಕು ಎಂದು ಕೊಂಡವನು ಕೊನೆಗೆ ಕಾಡುಗಳ್ಳ ವೀರಪ್ಪನ್ ಗುಂಪಿಗೆ ಸೇರಿಕೊಂಡ. ಅರಣ್ಯ ಇಲಾಖೆ ಸಿಬ್ಬಂದಿ ಅಪಹರಿಸಿದ ಪ್ರಕರಣದಲ್ಲಿ ಬರೋಬ್ಬರಿ 17 ವರ್ಷ ಜೈಲು ಶಿಕ್ಷೆ ಅನುಭವಿಸಿ ಕಳೆದ 2016ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ಮೇಲೆ ಆತನ ಬದುಕಿನ ಚಿತ್ರಣವೇ ಬದಲಾಗಿದೆ.

Love story of Veerappan's companion Anburaj gundal
ವೀರಪ್ಪನ್ ಸಹಚರ ಅನ್ಬುರಾಜ್ ಗುಂಡಾಳ್

ಚಾಮರಾಜನಗರ:ಇವರಿಬ್ಬರೂ ಅಂದು ಅಪರಾಧಿಗಳು. ಆದರೆ, ಇಂದು ಸ್ವಾವಲಂಬಿ ಜೀವನ ನಡೆಸುತ್ತಿರುವ ಮಾದರಿ ವ್ಯಕ್ತಿಗಳು. ಪ್ರೇಮಿಗಳ ದಿನವಾದ ಇಂದು ಇವರಿಬ್ಬರ ಲವ್ ಕಹಾನಿ ಇದು.

ಪೊಲೀಸ್ ಆಗಬೇಕೆಂದುಕೊಂಡವನು ಕೊನೆಗೆ ಕಾಡುಗಳ್ಳ ವೀರಪ್ಪನ್ ಗುಂಪಿಗೆ ಸೇರಿಕೊಂಡ. ತಮಿಳುನಾಡಿನ ಈರೋಡು ಜಿಲ್ಲೆಯ ಆಂದಿಯೂರು ತಾಲೂಕಿನ ಪುದುಕ್ಕಾಡು ಗ್ರಾಮದ ಅನ್ಬುರಾಜ್ ಗುಂಡಾಳ್ ಜಲಾಶಯ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಅಪಹರಿಸಿದ ಪ್ರಕರಣದಲ್ಲಿ ಬರೋಬ್ಬರಿ 17 ವರ್ಷ ಜೈಲು ಶಿಕ್ಷೆ ಅನುಭವಿಸಿ ಕಳೆದ 2016ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಅನ್ಬುರಾಜ್ ಕುಟುಂಬ

ಇನ್ನು, ಚೆನ್ನೈ ಮೂಲದ ರೇವತಿ ಎಂಬ ಅನಾಥೆ ತನ್ನ 14 ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿದ್ದಳು. ಆಗ ತನ್ನನ್ನು ಮುಂಬೈಗೆ ಮಾರಾಟ ಮಾಡಲು ಮುಂದಾದ ವ್ಯಕ್ತಿಯೊಬ್ಬರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಬಳಿಕ, ತನ್ನ 18 ನೇ ವಯಸ್ಸಿನಲ್ಲಿ ಎಲ್ಲ ತಪ್ಪನ್ನು ಒಪ್ಪಿಕೊಂಡಿದ್ದರಿಂದ 2006ರಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. 13 ವರ್ಷಗಳ ಜೈಲುವಾಸದ ನಂತರ 2015ರಲ್ಲಿ ಬಿಡುಗಡೆಯಾಗಿದ್ದಾರೆ.

ನಾಟಕದ ಮೂಲಕ ಹುಟ್ಟಿದ ಪ್ರೀತಿ:ಖೈದಿಗಳ ಬದುಕನ್ನು ಹಸನು ಮಾಡಬೇಕು, ಮುಖ್ಯವಾಹಿನಿಗೆ ಬಂದು ಎಲ್ಲರೊಂದಿಗೆ ಬೆರೆಯಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ಸಂಕಲ್ಪ ಎಂಬ ರಂಗ ತಂಡಕ್ಕೆ ಮೈಸೂರು ಜೈಲಿನಲ್ಲಿದ್ದ ಅನ್ಬುರಾಜ್ ಸೇರಿಕೊಳ್ಳುತ್ತಾರೆ. ಅದರಂತೆ ಬೆಂಗಳೂರು ಜೈಲಿನಲ್ಲಿದ್ದ ರೇವತಿಯೂ ತಂಡಕ್ಕೆ ಸೇರಿಕೊಂಡ ಬಳಿಕ ಇಬ್ಬರಲ್ಲೂ ಸ್ನೇಹ ಮೂಡುತ್ತದೆ.

ಅನ್ಬುರಾಜ್

ನಾಟಕಕ್ಕೆಂದು ಹಲವಾರು ಊರುಗಳಿಗೆ ತೆರಳುತ್ತಿದ್ದಾಗ ಇಬ್ಬರಲ್ಲೂ ಪ್ರೇಮ ಮೊಳಕೆಯೊಡೆದು ಸನ್ನಡತೆ ಆಧಾರದ ಮೇಲೆ 2011ರಲ್ಲಿ ಇಬ್ಬರಿಗೂ ಪೆರೋಲ್ ನೀಡಿದಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ರೇವತಿ ಜೈಲಿನಲ್ಲಿರುವಾಗಲೇ ಮುಕ್ತಾ ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಈಗ ಮುಕ್ತಳಿಗೆ 10 ವರ್ಷವಾಗಿದ್ದು, ಅಗರನ್ ಎಂಬ 2 ವರ್ಷದ ಗಂಡು ಮಗನೂ ಇದ್ದಾನೆ.

ಜೈಲಿನಿಂದ ಬಂದ ಬಳಿಕ ಇಬ್ಬರೂ ಈರೋಡು ಜಿಲ್ಲೆಯ ಆಂದಿಯೂರು ತಾಲೂಕಿನ ಪುದುಕ್ಕಾಡು ಗ್ರಾಮದಲ್ಲಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಕೊಬ್ಬರಿ ಎಣ್ಣೆ ಮಿಲ್ ಆರಂಭಿಸಿ 4-5 ಮಂದಿಗೆ ನೌಕರಿ ನೀಡಿದ್ದಾರೆ. ಅಲ್ಲದೇ ಗಿರಿಜನ- ಪರಿಸರ ಕುರಿತಾದ ತ್ರೈಮಾಸಿಕ ಪತ್ರಿಕೆಯನ್ನೂ ಅನ್ಬು ನಡೆಸುತ್ತಿದ್ದು,‌ ಆಕಸ್ಮಿಕವಾಗಿ ಆದ ಅಪರಾಧದಿಂದ ಹೊರಬಂದು ಮಾದರಿ ಬದುಕು ಕಟ್ಟುಕೊಂಡಿದ್ದಾರೆ ಒಂದು ಕಾಲದ ಜೈಲುಹಕ್ಕಿಗಳು.

Last Updated : Feb 14, 2020, 2:17 PM IST

ABOUT THE AUTHOR

...view details