ಚಾಮರಾಜನಗರ: ಕಂದಾಯ ಇಲಾಖೆ ಎಂದರೆ ಕೆಲಸದ ಒತ್ತಡವಿರುವುದು ಸಹಜ. ಆದರೆ, ಅದರ ನಡುವೆಯೂ ಗ್ರಾಮಲೆಕ್ಕಿಗರೊಬ್ಬರು ಕವನಗಳನ್ನು ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಗ್ರಾಮ ಲೆಕ್ಕಿಗನ ಸಾಹಿತ್ಯ ಕೃಷಿ; ಕಂದಾಯದ ಲೆಕ್ಕದೊಟ್ಟಿಗೆ ಕವನ ರಚನೆ
ಚಾಮರಾಜನಗರದಲ್ಲಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕೆಲಸದ ಒತ್ತಡದ ನಡುವೆಯೂ "ಚಿತ್ತದೊಳಗೇಕೊ ಮತ್ತದೇ ನೆನಪು" ಎಂಬ ಕವನ ಸಂಕಲನವನ್ನು ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿಯೂ ಗಮನ ಸೆಳೆದಿದ್ದಾರೆ.
ಬಳ್ಳಾರಿ ಮೂಲದವರಾದ ಕೆ.ಶ್ರೀಧರ್ ತಮ್ಮಡಹಳ್ಳಿ ಗ್ರಾ.ಪಂನ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು "ಚಿತ್ತದೊಳಗೇಕೊ ಮತ್ತದೇ ನೆನಪು" ಎಂಬ ಕವನ ಸಂಕಲನ ರಚಿಸಿದ್ದಾರೆ. ಇದೇ ಡಿ.4ರ ಬೆಳಗ್ಗೆ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಾಡೋಜ ಪುರಸ್ಕೃತ ಡಾ.ಮಹೇಶ್ ಜೋಷಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ಹಿಂದೆ ನೀರಜಗೇಕೆ ನಿಕೃಷ್ಟ ಬದುಕು, ಸ್ವಪ್ನದಲ್ಲಿ ಸೊರಗಿದ ಪ್ರೀತಿ ಎಂಬ ಕಾದಂಬರಿಗಳನ್ನು ಬರೆದು ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಪಡೆದಿದ್ದರು. ಈಗ ಚಿತ್ತದೊಳಗೇಕೋ ಮತ್ತದೇ ನೆನಪು ಎಂಬ 60 ಕವನಗಳ ಸಂಕಲನ ಹೊರ ತರುತ್ತಿದ್ದಾರೆ. ಪುಸ್ತಕ ಓದುವ ಮತ್ತು ಬರೆಯುವ ಸಂಸ್ಕೃತಿ ಮರೆಯಾಗುತ್ತಿರುವ ಹೊತ್ತಿನಲ್ಲಿ ಸರ್ಕಾರಿ ನೌಕರರೊಬ್ಬರು ಸಾಹಿತ್ಯ ರಚಿಸಿಸುತ್ತಿರುವುದು ಗಮನಾರ್ಹವಾಗಿದೆ.