ಕರ್ನಾಟಕ

karnataka

By

Published : Jun 28, 2023, 1:48 PM IST

ETV Bharat / state

ಹೊಲದಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ : ಪ್ರಾಣಾಪಾಯದಿಂದ ಪಾರಾದ ರೈತ

ಜಮೀನಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ರೈತನ ಮೇಲೆ ಚಿರತೆ ದಾಳಿ
ರೈತನ ಮೇಲೆ ಚಿರತೆ ದಾಳಿ

ಚಾಮರಾಜನಗರ:ಮೂರು ದಿನಗಳ ಹಿಂದಷ್ಟೇ ಬಾಲಕಿ ಮೇಲೆ ಚಿರತೆ ದಾಳಿ ನಡೆದಿತ್ತು. ಇದಾದ ಮರುದಿನವೇ ಮತ್ತೊಂದು ಊರಲ್ಲಿ ರೈತನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ‌ ಕಂಚಗಳ್ಳಿ ಗ್ರಾಮದಲ್ಲಿ ನಡೆದಿದೆ.

ಕಂಚಗಳ್ಳಿ ಗ್ರಾಮದ ನಂಜಪ್ಪ ಎಂಬವರು ಚಿರತೆ ದಾಳಿಯಿಂದ ಪಾರಾಗಿರುವ ರೈತ. ಜೋಳದ ಫಸಲನ್ನು ಕಾಯಲು ಜಮೀನಿನಲ್ಲಿ ಮೊಬೈಲ್ ಹಿಡಿದು ಮಲಗಿದ್ದ ವೇಳೆ ಚಿರತೆ ಬಂದು ಪರಚಿದೆ. ಕೂಡಲೇ, ಎಚ್ಚೆತ್ತ ನಂಜಪ್ಪ ಕೋಲು ಹಿಡಿದು ಕಿರುಚಿದಾಗ ಚಿರತೆ ಪರಾರಿಯಾಗಿದೆ. ಇನ್ನು, ನಂಜಪ್ಪಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾಮಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿರತೆ ಸೆರೆಗೆ 4 ಬೋನು:ಬಿಆರ್​ಟಿ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ ದಾಳಿ ಪ್ರಕರಣ ನಡೆದಿದ್ದು ಕಗ್ಗಲಿಗುಂದಿ ಗ್ರಾಮದಲ್ಲಿ 4 ಬೋನುಗಳನ್ನು ಅಳವಡಿಸಲಾಗಿದೆ.‌ ಜನರು ಜಾಗೃತರಾಗಿರಬೇಕೆಂದು ಈಗಾಗಾಲೇ ಅರಣ್ಯ ಇಲಾಖೆ ಜನರಿಗೆ ತಿಳಿಸಿದೆ. ಸಂಜೆ ಬಳಿಕ ಜನರು ಎಚ್ಚರಿಕೆಯಿಂದ ಇರಬೇಕು, ಏಕಾಂಗಿಯಾಗಿ ಓಡಾಡಬಾರದು, ಜಾನುವಾರುಗಳ ಮೇಲೆ ಹೆಚ್ಚಿನ ‌ನಿಗಾ ವಹಿಸಬೇಕೆಂದು ಅರಣ್ಯ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ:ಮನೆಯ ಮುಂಭಾಗದಿಂದಲೇ ಬಾಲಕಿಯನ್ನು 200 ಮೀ. ಎಳೆದೊಯ್ದ ಚಿರತೆ: ಜನರ ಕಿರುಚಾಟಕ್ಕೆ ಬಾಲಕಿ ಬಿಟ್ಟು ಪರಾರಿ

6 ವರ್ಷದ ಬಾಲಕಿ‌ ಮೇಲೆ ದಾಳಿ :ಸೋಮವಾರದಂದುಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿತ್ತು. ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ರಾತ್ರಿ 9 ಗಂಟೆ ಸಮಯದಲ್ಲಿ ದಾಳಿ ನಡೆಸಿತ್ತು. ಘಟನೆಯಲ್ಲಿ ಸುಶೀಲಾ (6) ಎಂಬ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು.

ಸುಶೀಲಾ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಚಿರತೆ ಬಾಲಕಿ ಮೇಲೆ ದಾಳಿ ನಡೆಸಿತ್ತು. ಬಾಲಕಿ ಮೇಲೆ ಎರಗಿದ ಚಿರತೆ ಸುಮಾರು 200 ಮೀಟರ್ ವರೆಗೆ ಎಳೆದೊಯ್ದಿತ್ತು. ಬಾಲಕಿಯ ಕಿರುಚಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಯಾರೋ ಕಳ್ಳರು ಬಂದಿದ್ದಾರೆ ಎಂದು ದೊಣ್ಣೆಗಳನ್ನು ಎತ್ತಿಕೊಂಡು ಹೋರ ಬಂದಿದ್ದ ವೇಳೆ ಗ್ರಾಮಸ್ಥರ ಕೂಗಾಟ - ಚೀರಾಟದಿಂದ ಬೆದರಿದ ಚಿರತೆ ಮಗುವನ್ನು ಸ್ಥಳದಲ್ಲೇ ಬಿಟ್ಟು ಕಾಡಿನತ್ತ ಪರಾರಿಯಾಗಿತ್ತು.

ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಆಂಬ್ಯುಲೆನ್ಸ್​ ಸಿಬ್ಬಂದಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಬಾಲಕಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಘಟನೆ ಬಳಿಕ ಹೊರ ಹೋಗಲು ಗ್ರಾಮಸ್ಥರು ಹಿಂದೇಟು ಹಾಕ ತೊಡಗಿದ್ದಾರು. ಅಲ್ಲದೇ ಕೂಡಲೆ ಚಿರೆತಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.

ಇದನ್ನೂ ಓದಿ:Leopard in Tumkur: ಒಂದೇ ಕಡೆ ಏಕಾಏಕಿ ಮೂರು ಚಿರತೆಗಳು ಪ್ರತ್ಯಕ್ಷ.. ಬೆಚ್ಚಿ ಬಿದ್ದ ತುಮಕೂರು ಮಂದಿ

ABOUT THE AUTHOR

...view details