ಚಾಮರಾಜನಗರ:ಕೆಲವರು ಸಂಪೂರ್ಣ ಗುಣಮುಖರಾಗಿದ್ದರೂ ಆಸ್ಪತ್ರೆಯಿಂದ ಹೋಗಲು ತಯಾರಿಯಿಲ್ಲ, ಆಸ್ಪತ್ರೆಗೆ ಬಂದ ಕೂಡಲೇ ಅವಶ್ಯ ಇಲ್ಲದಿದ್ದರೂ ಆ್ಯಕ್ಸಿಜನ್ ಬೇಕೆನ್ನುತ್ತಿದ್ದಾರೆ ಎಂದು ಡಿಸಿ ಡಾ. ಎಂ.ಆರ್. ರವಿ ಕೆಲ ಸೋಂಕಿತರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗುಂಡ್ಲುಪೇಟೆ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಣಮುಖರಾದರೂ ಆಸ್ಪತ್ರೆಯಿಂದ ತೆರಳಲು ತಯಾರಿಲ್ಲದವರನ್ನು ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಿ ಎಂದು ವೈದ್ಯರಿಗೆ ಸೂಚಿಸಿದ್ದೇನೆ. ತಾಲೂಕಿನಲ್ಲಿ 3 ಕೋವಿಡ್ ಕೇರ್ ಸೆಂಟರ್ಗಳಲ್ಲಿ ಒಟ್ಟು 525 ಹಾಸಿಗೆಗಳಿದ್ದು ಕೇವಲ 70 ಮಂದಿ ಮಾತ್ರ ಇದ್ದಾರೆ ಎಂದರು.
ಯಾರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ಸೌಲಭ್ಯವಿಲ್ಲವೊ ದಯವಿಟ್ಟು ಕೇರ್ ಸೆಂಟರಿಗೆ ಬರಬೇಕು. ವೈದ್ಯರು, ದಾದಿಯರ ನಿಗಾದಲ್ಲಿದ್ದು, ಅವಶ್ಯ ಬಿದ್ದಾಗ ತುರ್ತು ಸ್ಪಂದನೆ ಸಿಗಲಿದೆ ಎಂದು ಅವರು ಮನವಿ ಮಾಡಿದರು.