ಚಾಮರಾಜನಗರ:ತಮಿಳುನಾಡಿನ ಹೊಸೂರಿನಲ್ಲಿ ಪುಂಡಾನೆಯನ್ನು ಸೆರೆ ಹಿಡಿದು, ಮಧುಮಲೈ ಕಾಡಿಗೆ ತಮಿಳುನಾಡಿನ ಅರಣ್ಯಾಧಿಕಾರಿಗಳು ತಂದು ಬಿಟ್ಟಿದ್ದರು. ಅವರು ಮಾಡಿದ್ದ ಎಡವಟ್ಟಿಗೆ ಗುಂಡ್ಲುಪೇಟೆ ಭಾಗದ ಜನರು ಕಳೆದ ಮೂರು ದಿನದಿಂದ ಅನುಭವಿಸಿದ್ದ ಆತಂಕ ಇಂದು ಕೊನೆಗೊಂಡಿದೆ.
ಅಂದಾಜು 15-20 ವರ್ಷದೊಳಗಿನ ಕಟ್ಟುಮಸ್ತಾದ ಒಂಟಿ ಸಲಗ ಇದಾಗಿದ್ದು, ಅದರ ರೋಷಾವೇಷಕ್ಕೆ ಕೃಷ್ಣಗಿರಿ ಜಿಲ್ಲೆಯಲ್ಲಿ ಬರೋಬ್ಬರಿ 8 ಮಂದಿ ಸಾವನ್ನಪ್ಪಿದ್ದರು. ಇನ್ನು ಗುಂಡ್ಲುಪೇಟೆ ತಾಲೂಕಿನಲ್ಲಿ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅರವಳಿಕೆ ನೀಡಿದ ಬಳಿಕವೂ 2 ಬೈಕ್ಗಳ ಮೇಲೆ ದಾಳಿ ಮಾಡಿ, ಹಸಿಕಡಲೆ ಹೊಲವನ್ನು ಹೊಸಕಿ ಹಾಕಿ ಕೋಪ ಪ್ರದರ್ಶಿಸಿ ಕೊನೆಗೂ ದಸರಾ ಆನೆಗಳಿಗೆ ಈ ಪುಂಡಾನೆ ಶರಣಾಗಿದೆ.
ನೆರೆ ರಾಜ್ಯದ ಎಡವಟ್ಟು:
ಪುಂಡಾನೆ ಎಂದು ಗೊತ್ತಿದ್ರೂ ಪ್ರಯೋಗ ಮಾಡುವ ಉದ್ದೇಶದಿಂದ ಈ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ಮಧುಮಲೈಗೆ ತಂದು ಬಿಟ್ಟಿದ್ದರು. ಬಂದ ದಿನವೇ ಕಾರೊಂದರ ಮೇಲೆ ದಾಳಿ ಮಾಡಿ ಬಳಿಕ ಬಂಡೀಪುರದ ಮೂಲಕ ಗುಂಡ್ಲುಪೇಟೆಯತ್ತ ಧಾವಿಸಿ ಬಂದಿದೆ. ರೇಡಿಯೋ ಕಾಲರ್ನ ಬ್ಯಾಟರಿ ಕಾರ್ಯನಿರ್ವಹಿಸದೆ, ಆನೆ ಇರುವಿಕೆ ಬಗ್ಗೆ ಮಾಹಿತಿ ಇಲ್ಲದಿದ್ದಾಗಲೂ ಕರ್ನಾಟಕ ಮತ್ತು ಕೇರಳ ಅರಣ್ಯ ಇಲಾಖೆಗೆ ತಮಿಳುನಾಡು ಮಾಹಿತಿ ನೀಡದೇ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಪುಂಡಾನೆ ಸೆರೆಗೆ ಸಹಾಯ ಮಾಡದೇ ನಿರ್ಲಕ್ಷ್ಯ ವಹಿಸಿ ಕೈಚೆಲ್ಲಿದ್ದಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ.
ಗುಂಡ್ಲುಪೇಟೆಯ ಶಿವಪುರ ಬಳಿಕ ಹಂಗಳ ತದನಂತರ ಪಾರ್ವತಿ ಬೆಟ್ಟದಲ್ಲಿ ಅಡ್ಡಾಡಿರುವ ಪುಂಡಾನೆ, ಇಂದು ಬನ್ನಿತಾಳಪುರ, ಪಡಗೂರಿನಲ್ಲಿ ಅಟಾಟೋಪ ನಡೆಸುತ್ತಿದ್ದಾಗ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ.