ಚಾಮರಾಜನಗರ: ಉದ್ಘಾಟನೆಗಾಗಿ ಕಾಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ವ್ಯಕ್ತಿಯೊಬ್ಬರ ನೆರವಿಗಾಗಿ ಆರೋಗ್ಯ ಸಚಿವರು ತುರ್ತಾಗಿ ಕಳುಹಿಸಿದ ಘಟನೆ ಶುಕ್ರವಾರ ಕೊಳ್ಳೇಗಾಲದಲ್ಲಿ ನಡೆದಿದೆ. ಪ್ರತಿಯೊಂದಕ್ಕೂ ಸಚಿವರಿಂದ ಉದ್ಘಾನೆಯಾಗಲಿ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ವಿಶೇಷವಾಗಿ ಆರೋಗ್ಯ ವಿಚಾರಗಳಲ್ಲಿ ಉದ್ಘಾಟನೆಗಿಂತ ಜನರ ಸಂಕಷ್ಟಗಳಿಗೆ ಮೊದಲು ಸ್ಪಂದಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿ, ಉದ್ಘಾಟಿಸಲು ತರುತ್ತಿದ್ದ ನೂತನ ಆಂಬ್ಯುಲೆನ್ಸ್ ಅನ್ನು ಮಾರ್ಗಮಧ್ಯದಲ್ಲಿಯೇ ವಾಪಸ್ ಕಳುಹಿಸಿದ್ದಾರೆ.
ಆದಿವಾಸಿಗಳ ಅನುಕೂಲಕ್ಕಾಗಿ ಸಿಎಸ್ಆರ್ ಯೋಜನೆಯಡಿ ಆಕ್ಸಾ ಬಿಸಿನೆಸ್ ಸರ್ವೀಸ್ನವರು ಆದಿವಾಸಿಗಳ ಆರೋಗ್ಯ ಸಂಶೋಧನಾ ಕೇಂದ್ರಕ್ಕೆ ಆಂಬ್ಯುಲೆನ್ಸ್ ಒದಗಿಸಿದ್ದರು. ಚಾಮರಾಜನಗರ ಪ್ರವಾಸದಲ್ಲಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೂತನ ಆಂಬ್ಯುಲೆನ್ಸ್ ಅನ್ನು ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ಗೆ ಹಸ್ತಾಂತರಿಸಬೇಕಿತ್ತು. ಸಚಿವರಿಂದ ಚಾಲನೆ ಕೊಡಿಸಲು ಆಂಬ್ಯುಲೆನ್ಸ್ ಅನ್ನು ಕೊಳ್ಳೇಗಾಲಕ್ಕೆ ತರಲಾಗುತ್ತಿತ್ತು. ಇದೇ ವೇಳೆ ಗೊಂಬೆಗಲ್ಲು ಭಾಗದಲ್ಲಿ ಆನೆ ದಾಳಿಯಾಗಿ ವ್ಯಕ್ತಿಯೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಕರೆ ಬಂದಿದೆ. ಇದರಿಂದಾಗಿ ಆಂಬ್ಯುಲೆನ್ಸ್ ಅನ್ನು ಆನೆ ದಾಳಿಯಾದ ಪ್ರದೇಶಕ್ಕೆ ಕಳುಹಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.