ಕರ್ನಾಟಕ

karnataka

By

Published : Feb 16, 2023, 2:03 PM IST

Updated : Feb 17, 2023, 2:35 PM IST

ETV Bharat / state

ತಮಿಳುನಾಡು ಬೇಟೆಗಾರರು ರಾಜ್ಯದ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ

ಜಿಂಕೆ ಬೇಟೆಯಾಡಿ ತೆರಳುತ್ತಿದ್ದ ತಮಿಳುನಾಡಿನ ಕಳ್ಳ ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ನದಿಗೆ ಹಾರಿ ಪರಾರಿಯಾಗಿದ್ದಾರೆ.

Kaveri Wildlife Sanctuary
ಕಾವೇರಿ ವನ್ಯಜೀವಿಧಾಮ

ಚಾಮರಾಜನಗರ: ವೀರಪ್ಪನ್ ಅಳಿದ ಬಳಿಕವೂ ಹನೂರು ತಾಲೂಕಿನ ಗೋಪಿನಾಥಂ, ಪಾಲಾರ್ ಸುತ್ತಮುತ್ತಲು ಬೇಟೆಗಾರರು ಹಾವಳಿ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಳ್ಳ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಬರುವ ಪಾಲಾರ್ ಎಂಬಲ್ಲಿ ಜಿಂಕೆ ಬೇಟೆಯಾಡಿ ತೆರಳುತ್ತಿದ್ದ ಅಂದಾಜು ನಾಲ್ವರು ಕಳ್ಳಬೇಟೆಗಾರರು ಹಾಗೂ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ‌ ಚಕಮಕಿ ನಡೆದಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಕಳ್ಳ ಬೇಟೆಗಾರರು ನದಿಗೆ ಹಾರಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಬೇಟೆಗಾರರು ತಲೆ ಮೇಲೆ ಅಳವಡಿಸಿಕೊಂಡಿದ್ದ ಕ್ಯಾಪ್​ ಟಾರ್ಚ್​ಗಳು ಪತ್ತೆಯಾಗಿದೆ. ಈ ಘಟನೆ ಬಗ್ಗೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡಿರುವ ಪಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆ ಬಗ್ಗೆ ಎಸಿಎಫ್ ಅಂಕರಾಜು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಗಡಿಯಂತೆ ಪಾಲಾರ್ ನದಿ ಹರಿಯುತ್ತಿದ್ದು, ಕಳ್ಳ ಬೇಟೆಗಾರರು ತಮಿಳುನಾಡು ಭಾಗದಿಂದ ತೆಪ್ಪದ ಮೂಲಕ ರಾಜ್ಯಕ್ಕೆ ಬಂದು ಜಿಂಕೆ ಬೇಟೆಯಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಕಳ್ಳಬೇಟೆಗಾರರು ಗುಂಡಿನ‌ ದಾಳಿ ನಡೆಸಿದ್ದಾರೆ ಎಂದು ಅರಣ್ಯ ಇಲಾಖೆ ಮತ್ತು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಚಕಮಕಿ ನಡೆದಿರುವ ಸ್ಥಳದಲ್ಲಿ ನಾಡ ಬಂದೂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಾವೇರಿ ವನ್ಯಜೀವಿಧಾಮದ ಗೋಪಿನಾಥಂ ವಲಯ ಅರಣ್ಯಾಧಿಕಾರಿ ಎಸ್‌.ಸಂಪತ್ ಪಟೇಲ್ ಎನ್ನುವವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ನಾಲ್ವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

14ರ ಮಧ್ಯರಾತ್ರಿ ಅಡಿ ಪಾಲರ್ ಎಂಬ ಸ್ಥಳದಲ್ಲಿ ಮೂವರು ಫಾರೆಸ್ಟ್ ಗಾರ್ಡ್​ಗಳು ಕರ್ತವ್ಯ ನಿರ್ವಹಿಸುತ್ತಿದ್ದಾಗ ಪಾಲರ್ ನದಿಯ ಹಿನ್ನೀರಿನಲ್ಲಿ ತೆಪ್ಪ‌ ನಿಲ್ಲಿಸಿರುವುದು ಕಂಡು ಬಂದಿದ್ದರಿಂದ ಕಳ್ಳ ಬೇಟೆಗಾರರು ಬಂದಿರಬಹುದು ಎಂದು ಶಂಕಿಸಿ ಬಂಡೆಯ ಬಳಿ ಮರೆಯಾಗಿ ಕಾಯುತ್ತ ಕುಳಿತಿದ್ದರು. ಈ ವೇಳೆ ನದಿಯ ಇನ್ನೊಂದು ಭಾಗದಲ್ಲಿ ಗಸ್ತು ನಡೆಸುತ್ತಿದ್ದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಸರ್ಚ್ ಲೈಟ್ ಹಾಕಿದರು. ಆ ವೇಳೆ ಕೇವಲ 20-25 ಮೀಟರ್ ಅಂತರದಲ್ಲಿದ್ದ ಕಳ್ಳಬೇಟೆಗಾರರು, ನಮ್ಮ ಸಿಬ್ಬಂದಿಗೆ ಮುಖಾಮುಖಿಯಾಗಿದ್ದಾರೆ. ಖಾಕಿ ಸಮವಸ್ತ್ರಧಾರಿಗಳಾದ ನಮ್ಮ ಸಿಬ್ಬಂದಿ ಕಂಡು ಕಳ್ಳಬೇಟೆಗಾರರು ಬಂದೂಕಿನಿಂದ ನೇರವಾಗಿ ಗುಂಡು‌ ಹಾರಿಸತೊಡಗಿದರು. ಈ ವೇಳೆ, ಆತ್ಮ ರಕ್ಷಣೆಗಾಗಿ ಸಿಬ್ಬಂದಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು ಅಷ್ಟರಲ್ಲಾಗಲೇ ಬೇಟೆಗಾರರು ನದಿ ದಡದಲ್ಲಿ ಓಡಿ ಪರಾರಿಯಾದರು ಎಂದು ದೂರು ಪ್ರತಿಯಲ್ಲಿ ಉಲ್ಲೇಖ ‌ಮಾಡಲಾಗಿದೆ.

ತೆಪ್ಪ ನಿಲ್ಲಿಸಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿದ್ದು ನದಿ ದಡದಲ್ಲಿ ಹೆಡ್ ಟಾರ್ಚ್, ಟಾರ್ಚ್ ಚಾರ್ಜರ್, ಎರಡು ಜಿಂಕೆ ಮೃತದೇಹ, ನಾಡ ಬಂದೂಕು, ಮೊಬೈಲ್ ಫೋನ್, 2-3 ಕೆಜಿ ಯೂರಿಯಾ ರಸಗೊಬ್ಬರ ಸಿಕ್ಕಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಆನೆ ದಂತದ ಕಲಾಕೃತಿಗಳ ಮಾರಾಟ.. ಹುಬ್ಬಳ್ಳಿಯಲ್ಲಿ ಐವರು ಆರೋಪಿಗಳ ಬಂಧನ

ತಲೆಮರೆಸಿಕೊಂಡಿದ್ದ 15 ಮಂದಿ ಬಂಧನ‌:ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 15 ಮಂದಿಯನ್ನು ಬೇಗೂರು ಪೊಲೀಸರು ಬಂಧಿಸಿ ಜಿಲ್ಲಾ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಬೇಗೂರು ಠಾಣೆ ಪಿಎಸ್ಐ ಜಗದೀಶ್ ಧೂಳಶೆಟ್ಟಿ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಿ ವಿವಿಧ ಪ್ರಕರಣಗಳಲ್ಲಿ ವಾರೆಂಟ್ ಇದ್ದೂ ತಲೆಮರೆಸಿಕೊಂಡಿದ್ದ 10 ಮಂದಿ ಪುರುಷರು ಮತ್ತು ಐವರು ಮಹಿಳಾ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ಪ್ರತ್ಯೇಕ ಅಪಘಾತ, ನಾಲ್ವರಿಗೆ ಗಾಯ:ಬೈಕೊಂದು‌ ಪಾದಚಾರಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಸಮೀಪ ಬುಧವಾರ ರಾತ್ರಿ ನಡೆದಿದೆ. ರಾಘವಾಪುರ ಗ್ರಾಮದ ಸೋಮು ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಸತೀಶ ಎಂಬುವವರು ನಡೆದುಕೊಂಡು ಹೋಗುವಾಗ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪಾದಾಚಾರಿ ಸತೀಶ್ ಸೇರಿ ಬೈಕ್ ಸವಾರರಾದ ಮಹೇಶ ಸಂತೋಷ್ ಕೂಡ ಗಾಯಗೊಂಡಿದ್ದಾರೆ. ಮೂವರನ್ನು ಬೇಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಬೇಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಜೀಪ್​: ನಾಲ್ವರು ಮಹಿಳೆಯರು ಸೇರಿ ಆರು ಮಂದಿ ದುರ್ಮರಣ

Last Updated : Feb 17, 2023, 2:35 PM IST

ABOUT THE AUTHOR

...view details