ಚಾಮರಾಜನಗರ: ಪ್ರಜಾಪ್ರಭುತ್ವ ವ್ಯವಸ್ಥೆಗೆ ಜನಪ್ರತಿನಿಧಿಗಳಾದವರು ಹೇಗೆ ಕೊಳ್ಳಿ ಇಡುತ್ತಾರೆ ಎಂಬುದಕ್ಕೆ ಈ ಆಡಿಯೋ ತಾಜಾ ನಿದರ್ಶನವಾಗಿದೆ. ಹನೂರು ಪಟ್ಟಣ ಪಂಚಾಯಿತಿ ಇಬ್ಬರು ಸದಸ್ಯರು ಮಾತನಾಡಿಕೊಂಡಿದ್ದರೆನ್ನಲಾದ ಆಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದ್ದು, ಚುನಾವಣೆಯನ್ನೇ ಗುಮಾನಿಯಿಂದ ನೋಡುವ ಪರಿಸ್ಥಿತಿ ಸೃಷ್ಟಿಸಿದೆ.
11ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಸಂಪತ್ಕುಮಾರ್ ಮತ್ತು 13ನೇ ವಾರ್ಡಿನ ಜೆಡಿಎಸ್ ಸದಸ್ಯ ಮಹೇಶ್ಕುಮಾರ್ ಇವರಿಬ್ಬರು ಫೋನ್ನಲ್ಲಿ ಮಾತನಾಡಿರುವ ಆಡಿಯೋ ಇದಾಗಿದೆ ಎಂದು ತಿಳಿದುಬಂದಿದೆ. ಪಟ್ಟಣ ಪಂಚಾಯಯಿತಿ ಅಧ್ಯಕ್ಷ ಗಾದಿ ಹಿಡಿಯುವವರು ತಮಗೆ 5 ಲಕ್ಷ ರೂ. ಕೊಟ್ಟರೆ ಮಾತ್ರ ವೋಟು ಹಾಕೋಣ ಎಂದು ಒಬ್ಬರಿಗೊಬ್ಬರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಇಬ್ಬರೂ ಬರೋಬ್ಬರಿ 20 ನಿಮಿಷ ಫೋನಿನಲ್ಲಿ ಮಾತನಾಡಿದ್ದು ಹನೂರು ಪ.ಪಂ ಅಧ್ಯಕ್ಷಗಾದಿ ಮೀಸಲಾತಿಯನ್ನು ಶಾಸಕ ಆರ್. ನರೇಂದ್ರ ಮನಸ್ಸು ಮಾಡಿದರೆ ಬದಲಾಯಿಸಬಹುದು. ಆದರೆ ಸಾಮಾನ್ಯ ಕೆಟಗಿರಿ ಇರುವುದರಿಂದಲೇ ನಮಗೆ ಹಣ ಸಿಗಲಿದೆ ಎಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ.
ಚುನಾವಣೆಗೆ ಬರೋಬ್ಬರಿ 23 ಲಕ್ಷ ಖರ್ಚು ಮಾಡಿದ್ದೇನೆಂದು ಜೆಡಿಎಸ್ ಸದಸ್ಯ ಹೇಳಿಕೊಂಡಿದ್ದಕ್ಕೆ ಹನೂರು ಹೊಸ ತಾಲೂಕು ಕೇಂದ್ರವಾಗಿರುವುದರಿಂದ 100 ಕೋಟಿ ಅನುದಾನ ಬರಲಿದೆ, ಅಧ್ಯಕ್ಷ- ಉಪಾಧ್ಯಕ್ಷರು ಶೇ.5 ರಷ್ಟು ಕಮಿಷನ್ ಪಡೆದರೆ ನಮಗೂ ಶೇ.2 ಕಮಿಷನ್ ಕೊಡಬೇಕೆಂದು ಮೊದಲೇ ತಿಳಿಸಿಬಿಡೋಣ ಎಂದು ಕಾಂಗ್ರೆಸ್ ಸದಸ್ಯ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯ ಸಂಪತ್ ಕುಮಾರ್ ತನ್ನ ವಾರ್ಡಿನಲ್ಲಿ ಈಗಾಗಲೇ 3.5ಕೋಟಿ ವೆಚ್ಚದ ಕಾಮಗಾರಿ ನಡೆದರೆ ಶೇ.5 ಕಮಿಷನ್ ಎಂದರೂ 15ಲಕ್ಷಕ್ಕೂ ಹೆಚ್ಚು ಹಣ ಬರುತ್ತದೆ ಎಂದು ತಿಳಿಸಿರುವುದು ಚುನಾವಣೆ ಎಂಬುದು ವ್ಯಾಪಾರವಾಗಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಹುಟ್ಟುಹಾಕಿದೆ.