ಕರ್ನಾಟಕ

karnataka

ಕೊಳ್ಳೇಗಾಲ: ಪ್ರೀತಿಸಿದವನ ಮದುವೆಯಾಗಲು ಪೋಷಕರ ತೊರೆದು ಬಾಲ ಮಂದಿರ ಸೇರಿದ ಬಾಲಕಿ

By

Published : Feb 7, 2022, 7:29 PM IST

ಪಾಲಕರ ಮನೆಯಲ್ಲೇ ಇರಲು ಇಚ್ಚಿಸದ ಬಾಲಕಿಯು ಪ್ರಿಯಕರನ ಜೊತೆ ಮದುವೆಯಾಗಲು ನಿರ್ಧರಿಸಿದ್ದು, ಪೊಲೀಸರಿಗೆ ದೂರು‌ ನೀಡಿದ್ದಾಳೆ. 18 ವರ್ಷ ಆಗುವವರೆಗೂ ಬಾಲ ಮಂದಿರದಲ್ಲಿ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

girl-filed-complaint-against-her-lover-at-kollegala
ಪೋಷಕರ ತೊರೆದು ಬಾಲ ಮಂದಿರ ಸೇರಿದ ಬಾಲಕಿ

ಕೊಳ್ಳೇಗಾಲ(ಚಾಮರಾಜನಗರ):ಮದುವೆಯಾಗಲು ಪ್ರಿಯಕರ ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ಅಪ್ರಾಪ್ತೆಯೊಬ್ಬಳು ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿರುವ 17 ವರ್ಷದ ಅಪ್ರಾಪ್ತೆ ದೂರು ನೀಡಿದವಳು.

ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಮಹೇಶ್ ಅಲಿಯಾಸ್ ಅಪ್ಪು ಎಂಬಾತನ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ. ಹಲವು ವರ್ಷದಿಂದ ತಾವಿಬ್ಬರೂ ಪ್ರೀತಿಸುತ್ತಿರುವುದಾಗಿ ಪ್ರೇಮದ ಕಥೆಯನ್ನು ಲಿಖಿತ ರೂಪದಲ್ಲಿ ಠಾಣೆಗೆ‌ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಗ್ರಾಮದ ಶಾಲೆಯೊಂದಕ್ಕೆ ಹೋಗುತ್ತಿದ್ದ ವೇಳೆ ಮಹೇಶ್ ಹಾಗೂ ಅಪ್ರಾಪ್ತೆಯ ಪರಿಚಯವಾಗಿ ನಂತರದಲ್ಲಿ ಪ್ರೇಮಕ್ಕೆ ತಿರುಗಿತ್ತು. ಈ ಪ್ರೀತಿ ವಿಚಾರ ಇಬ್ಬರ ಮನೆಗೂ ತಿಳಿದು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿರೋಧ ಲೆಕ್ಕಿಸದ ಪ್ರೇಮಿಗಳು ಪ್ರೀತಿಯನ್ನು ಮುಂದುವರೆಸಿದ್ದರು.

ಇವರಿಬ್ಬರೂ ಆಗಾಗ್ಗೆ ಜೋಡಿಯಾಗಿ ತಿರುಗಾಡುವ ವಿಚಾರವು ಪಾಲಕರಿಗೆ ತಿಳಿದಿದ್ದರಿಂದ ಪ್ರೀಯಕರನ ಮನೆಗೆ ತೆರಳಿ ನಿನ್ನ ಜೊತೆ ಇರುವುದಾಗಿ ಅಪ್ರಾಪ್ತೆ ಕೇಳಿಕೊಂಡಿದ್ದಾಳೆ. ಪ್ರಿಯಕರನ ಮನೆಯವರು ನಿನಗೆ 18 ವರ್ಷ ಆಗಿಲ್ಲ, ಆದನಂತರ ನಿಮ್ಮಬ್ಬರಿಗೂ ಮದುವೆ ಮಾಡುವುದಾಗಿ ತಿಳಿಸಿ ವಾಪಸ್ ಮನೆಗೆ ಕಳುಹಿಸಿ ಕೊಟ್ಟಿದ್ದರು. ಬಳಿಕ ಪ್ರಿಯಕರನೂ ಕೂಡ 18 ವರ್ಷ ಆಗುವವರೆಗೂ ನಿಮ್ಮ ಮನೆಯಲ್ಲೆ ಇರು ಎಂದು ತಿಳಿಸಿದ್ದ. ಆದರೆ, ಕೆಲ ದಿನಗಳ ನಂತರ ಯುವಕ ಬಾಲಕಿಯ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎನ್ನಲಾಗಿದೆ.

ಇದರಿಂದ ಪಾಲಕರ ಮನೆಯಲ್ಲೆ ಇರಲು ಇಚ್ಚಿಸದ ಬಾಲಕಿಯು ಪ್ರಿಯಕರನ ಜೊತೆ ಮದುವೆಯಾಗಲು ನಿರ್ಧರಿಸಿದ್ದು, ಪೊಲೀಸರಿಗೆ ದೂರು‌ ನೀಡಿದ್ದಾಳೆ. 18 ವರ್ಷ ಆಗುವವರೆಗೂ ಬಾಲ ಮಂದಿರದಲ್ಲಿ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಈ ಸಂಬಂಧ ಗ್ರಾಮಾಂತರ ಠಾಣೆಯ ಪಿಎಸ್ಐ ಮಂಜುನಾಥ್ ಮುಂದಿನ‌ ಕ್ರಮ ಕೈಗೊಂಡಿದ್ದು, ಸದ್ಯ ದೂರುದಾರೆಯನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ:ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ​ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ

ABOUT THE AUTHOR

...view details