ಚಾಮರಾಜನಗರ: ವಾಮಾಚಾರಕ್ಕಾಗಿ ಜೀವಂತ ಗೂಬೆ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಾಗೇರಿ ಸಮೀಪ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಪುಟ್ಟರಾಜು ಮತ್ತು ಯಡಹಳ್ಳಿ ಗ್ರಾಮದ ಹರೀಶ್ ಬಂಧಿತರು. ಇವರು ಮಾಟ-ಮಾಂತ್ರಿಕನಿಗೆ ಕೊಡಲೆಂದು ಗೂಬೆ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನರಿತ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಗೂಬೆಯನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಢನಂಬಿಕೆಯಿಂದ ಗೂಬೆ ಸಂತತಿಗೆ ಕುತ್ತು: ಗೂಬೆ ಒಂದು ನಿಶಾಚರಿ. ಈ ಪಕ್ಷಿಯನ್ನು ಮಾಟ-ಮಂತ್ರಕ್ಕೆ ಬಳಸಲಾಗುತ್ತಿದೆ. ಮೂಢನಂಬಿಕೆಯಿಂದಾಗಿ ಮಾಂತ್ರಿಕರು ತರಹೇವಾರಿ ಬಣ್ಣದ ಗೂಬೆಗಳನ್ನು ಬಲಿ ಕೊಡುವ ರೂಢಿ ಮಾಡಿಕೊಂಡಿದ್ದು ಇವುಗಳನ್ನು ಸೆರೆ ಹಿಡಿಯಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಗೂಬೆ ತಲೆಗಳನ್ನು ಭಾವಚಿತ್ರಗಳಿಗೆ ಅಂಟಿಸಿದ್ದು, ಗೂಬೆ ಡಾಲರ್ಗಳನ್ನು ಹಾಕಿಕೊಂಡಿದ್ದು ಈ ಮೂಢನಂಬಿಕೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಶತಮಾನದ ಹಿಂದಿನ ದುಬಾರಿ ಬೆಲೆಯ ಟೆಲಿಸ್ಕೋಪ್ ಮಾರಾಟ ಯತ್ನ: ಚಿಕ್ಕಮಗಳೂರಲ್ಲಿ ಆರೋಪಿ ಬಂಧನ
ಅಪರಿಚಿತ ಶವಗಳು ಪತ್ತೆ:ಪ್ರತ್ಯೇಕ ಪ್ರಕರಣದಲ್ಲಿ ಅಪರಿಚಿತ ಇಬ್ಬರ ಶವಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರದ ಫೋನ್ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೋರ್ವ ಶನಿವಾರ ಮೃತಪಟ್ಟಿದ್ದು, ವ್ಯಕ್ತಿಯು ನೀಲಿ ಬಣ್ಣದ ಶರ್ಟ್ ಹಾಗೂ ಕೆಂಪು-ನೀಲಿ ಬಣ್ಣದ ಪಂಚೆ ಧರಿಸಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಜಿಲ್ಲಾಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದ್ದು, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಗುರುತು ಪತ್ತೆಗೆ ಮುಂದಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಟೀ ಕ್ಯಾಂಟೀನ್ ಸಮೀಪ ಅಂದಾಜು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. ವ್ಯಕ್ತಿಯು ಬಿಳಿ ಗಡ್ಡ ಮೀಸೆ ಮತ್ತು ತಲೆ ಕೂದಲು ಬಿಟ್ಟಿದ್ದು ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಈತನ ಗುರುತು ಇದ್ದವರು ಬೇಗೂರು ಠಾಣೆಗೆ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ:ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ : ಅನ್ಯಕೋಮಿನ ಯುವಕರಿಂದ ಹಲ್ಲೆ, ನಾಲ್ವರು ಆಸ್ಪತ್ರೆಗೆ ದಾಖಲು
ಬೈಕಿಗೆ ಕಾರು ಡಿಕ್ಕಿ:ಬೈಕಿಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಹೊರವಲಯದಲ್ಲಿ ನಡೆದಿದೆ. ಅಪಘಾತದಲ್ಲಿ ಸವಾರನಿಗೆ ಗಾಯಗಳಾಗಿದ್ದು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಬಿದ್ದು ಸಿಕ್ಕಿದ್ದು, ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.