ಕರ್ನಾಟಕ

karnataka

ಚಾಮರಾಜನಗರ: ವಾಹನಗಳ ಮೇಲೆ ಆನೆಗಳ ಸಿಟ್ಟೇಕೆ?, 2 ಕಾರುಗಳು ಜಖಂ- ವಿಡಿಯೋ

ಚಾಮರಾಜನಗರ ಗಡಿಭಾಗ ಆಸನೂರು ಸಮೀಪ ವಾಹನಗಳ ಮೇಲೆ ಆನೆಗಳು ದಾಳಿ ನಡೆಸಿವೆ.

By

Published : Jun 26, 2022, 10:15 AM IST

Published : Jun 26, 2022, 10:15 AM IST

Updated : Jun 28, 2022, 7:04 PM IST

Elephant attacks on vehicles
ಆನೆ ದಾಳಿ ಎರಡು ಕಾರು ಜಖಂ

ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿ ಹಾದುಹೋಗುವ, ಚಾಮರಾಜನಗರ-ತಮಿಳುನಾಡು ಗಡಿಭಾಗ ಆಸನೂರು ಸಮೀಪ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ‌.ದಿಢೀರ್​ ರಸ್ತೆ ಮಧ್ಯೆ ಮರಿ ಆನೆಯೊಂದಿಗೆ ಬಂದ ಎರಡು ಆನೆಗಳು ಎದುರಿಗೆ ಬಂದ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗಿವೆ. ಪೊಲೀಸ್ ಜೀಪೊಂದು ದಾಳಿಯಿಂದ ತಪ್ಪಿಸಿಕೊಂಡರೆ, ಅದರ ಹಿಂದಿದ್ದ ಎರಡು ಕಾರುಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಾಹನಗಳ ಮೇಲೆ ಆನೆಗಳ ದಾಳಿ

ಘಟನೆಯಿಂದ ಅರ್ಧತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಕ್ ಹಾಗು ಇತರೆ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಿದ ಬಳಿಕ ಸಂಚಾರ ಆರಂಭವಾಗಿದೆ. ಇನ್ನು ಕಬ್ಬಿನ ಲಾರಿಗಳು ಬರುವಾಗ ಅವನ್ನು ಅಡ್ಡ ಹಾಕಿ ಕಬ್ಬು ತಿನ್ನುವುದು ಈ ಆನೆಗಳಿಗೆ ಅಭ್ಯಾಸವಾಗಿದೆಯಂತೆ ಈ ಕಾರಣಕ್ಕೆ ಆಗಾಗ್ಗೆ ರಸ್ತೆಬದಿ ಬಂದು ಬೀಡುಬಿಟ್ಟಿರುತ್ತವೆ.

ಆನೆಗಳು ಕಾರಿನ ಮೇಲೆ ದಾಳಿ ಮಾಡುವ ವಿಡಿಯೋ ಭಾರೀ ವೈರಲ್​ ಆಗುತ್ತಿದ್ದಂತೆ ಈ ದೃಶ್ಯವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ತಮ್ಮದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವು ಮೂರ್ಖ ವೀಕ್ಷಕರು ಅನಾಗರೀಕ ವರ್ತನೆ ತೋರಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಆನೆಗಳು ಸೌಮ್ಯವಾಗಿರುತ್ತವೆ ಎಂಬ ಕಾರಣಕ್ಕಾಗಿ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಈ ಸೌಮ್ಯ ದೈತ್ಯರು ತಮ್ಮ ಶಕ್ತಿಯನ್ನು ತೋರಿಸಲು ಹೆಚ್ಚು ಸಮಯವೇನು ತೆಗೆದುಕೊಳ್ಳುವುದಿಲ್ಲ ಎಂದು ತಮ್ಮದೇ ರೀತಿಯಲ್ಲಿ ಖಾರವಾಗಿ ಬರೆದುಕೊಂಡಿದ್ದಾರೆ.

ಇದಕ್ಕೆ ನೆಟಿಜನ್​ಗಳು ಪ್ರತಿಕ್ರಿಯೆ ನೀಡಿದ್ದು, ಇಲ್ಲಿ ಅನಾಗರಿಕತೆಯ ವಿಷಯ ಏನು? ಕಾರು ಮಾಲೀಕರ ಯಾವುದೇ ತಪ್ಪು ನನಗೆ ಕಂಡುಬಂದಿಲ್ಲ. ಬದಲಿಗೆ ಅವರು ಯು-ಟರ್ನ್‌ಗೆ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಒಬ್ಬರು ಬರೆದರೆ, ಅಸ್ಸಾಂನಲ್ಲಿ ಮಾಡಿದಂತೆ ಹೆದ್ದಾರಿಯುದ್ದಕ್ಕೂ ಆನೆ ಕಾರಿಡಾರ್‌ಗಳನ್ನು ನಿರ್ಮಿಸಿ. ಆನೆಗಳು ವಲಸೆಯ ಮಾರ್ಗವನ್ನು ಅನುಸರಿಸುವಂತೆ ಕ್ರಮ ಜರುಗಿಸಿ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಆನೆಗಳ ಹತ್ತಿರ ಹೋಗಲು ಕಾರಿನ ಚಾಲಕನಿಗೆ ಅವಶ್ಯಕತೆ ಏನಿತ್ತು.. ಅವನು ಕಾರನ್ನು ನಿಲ್ಲಿಸಿ ಆನೆಗಳು ಶಾಂತವಾಗಿ ಹಾದುಹೋಗಲು ಬಿಡಬೇಕಿತ್ತು ಎಂದು ಮತ್ತೊಬ್ಬರು ಅಧಿಕಾರಿ ಪರವಾಗಿ ಬರೆದಿದ್ದರೆ, ಇಂಥಹ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂದು ನಾವೆಲ್ಲರೂ ಶಿಕ್ಷಣವನ್ನು ಪಡೆಯಬೇಕು. ಆ ಜನರು ಪ್ರಾಣಿಗಳನ್ನು ಪ್ರಚೋದಿಸುತ್ತಿದ್ದಾರೆ... ಇಲ್ಲಿ ಪ್ರಾಣಿಗಳು ಯಾರು? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್​ಗೆ ಪರ-ವಿರೋಧದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಕೊಡಗು: ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು, ಬೆಚ್ಚಿದ ಜನರು

Last Updated : Jun 28, 2022, 7:04 PM IST

ABOUT THE AUTHOR

...view details