ಚಾಮರಾಜನಗರ: ಹೈನುಗಾರಿಕೆಯಿಂದಲೇ ಜೀವನ ಕಟ್ಟಿಕೊಂಡು ಬದುಕು ಸುಂದರವಾಗಿಸಿಕೊಳ್ಳಿ ಎಂದು ಸರ್ಕಾರ ಪ್ರೋತ್ಸಾಹಿಸಿದರೇ, ಅರಣ್ಯ ಇಲಾಖೆ ಮಾತ್ರ ಹೆಚ್ಚು ಹಸು - ಮೇಕೆ ಸಾಕಬೇಡಿ ಎಂದು ಸಾರ್ವಜನಿಕ ನೊಟೀಸ್ ಅಂಟಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ನಡೆದಿದೆ.
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಗೋಪಿನಾಥಂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಡವಟ್ಟಿನ ಸಲಹೆಯೊಂದನ್ನು ಕೊಟ್ಟಿದ್ದು, ಅಗತ್ಯವಿರುವಷ್ಟು ಮಾತ್ರ ಹಸು - ಮೇಕೆ ಸಾಕಿ ಹೆಚ್ಚಿನವುಗಳನ್ನು ಬೇರೆಡೆಗೆ ಸಾಗಿಸಬೇಕು. ಜಾನುವಾರಗಳನ್ನು ಕಾಡಿಗೆ ಬಿಡುವುದರಿಂದ ಅರಣ್ಯ ನಾಶವಾಗುತ್ತಿದೆ ಎಂದು ಹೇಳಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಎರಡು ದಿನಗಳ ಕಾಲ ಟಿಆರ್ ತಂಡದವರು ಗೋಪಿನಾಥಂ ವಲಯಕ್ಕೆ ಭೇಟಿ ನೀಡಿದ್ದ ವೇಳೆ ಹೆಚ್ಚಿನ ದನಕರುಗಳು ಇದ್ದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಗುವಳಿಗೆ ಬೇಕಾದಷ್ಟು ಹಸು-ಮೇಕೆ ಇಟ್ಟುಕೊಂಡು ಉಳಿದವುಗಳನ್ನು ಬೇರೆಡೆಗೆ ಸಾಗಿಸಬೇಕು. ಅರಣ್ಯದೊಳಕ್ಕೆ ದನ - ಮೇಕೆ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.