ಕರ್ನಾಟಕ

karnataka

ETV Bharat / state

10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತ ಆತಂಕ: 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ - ಅರಣ್ಯ ಸಚಿವಾಲಯ

ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್​ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80ರ ದಶಕದಲ್ಲಿ ಸುಮಾರು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ.

vulture
ರಣಹದ್ದು

By

Published : Feb 25, 2023, 7:46 AM IST

Updated : Feb 25, 2023, 3:07 PM IST

ಡಬ್ಲ್ಯೂಸಿಎಸ್ ನ ಮುಖ್ಯಸ್ಥ ರಾಜಕುಮಾರ್..

ಚಾಮರಾಜನಗರ:ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ನಶಿಸುವ ಹಂತ ತಲುಪಿದೆ. ಇದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯ ರಣಹದ್ದುಗಳ ಸರ್ವೇಗೆ ಮುಂದಾಗಿದೆ. ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್​​ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80ರ ದಶಕದಲ್ಲಿ ಸರಿ ಸುಮಾರು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ 250ಕ್ಕೆ ಕುಸಿದಿದೆ ಎನ್ನಲಾಗಿದೆ ಎಂದು ಪರಿಸರ ಹೋರಾಟಗಾರ ಜೋಸೆಫ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆ ನೀಲಗಿರಿ ಶ್ರೇಣಿಯಲ್ಲಿ ಫೆ 25 ಹಾಗೂ 26 ರಂದು ಸರ್ವೇ ನಡೆಯಲಿದೆ. ಶುಕ್ರವಾರ(ನಿನ್ನೆ) ಬಂಡೀಪುರದಲ್ಲಿ ರಣಹದ್ದು ಸರ್ವೇಕ್ಷಣೆ ಬಗ್ಗೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ.

ಇದನ್ನೂ ಓದಿ:ವಿಜಯನಗರ: ಮರಳಿಗೂಡಿಗೆ ಹಾರಿದ ಸೆರೆ ಸಿಕ್ಕ ಯೂರೋಪಿನ್ ಗ್ರಿಫನ್ ರಣಹದ್ದು

ರಣಹದ್ದುಗಳೇಕೆ ಮುಖ್ಯ:ಸುಸ್ಥಿರ ಪರಿಸರದಲ್ಲಿ ಒಂದಕ್ಕೊಂದು ಸರಪಳಿ ಸಂಬಂಧ ಹೊಂದಿದ್ದು ರಣಹದ್ದುಗಳು ಬೇಟೆಯಾಡಿ ಬದುಕುವುದಿಲ್ಲ. ಕಾಡಿನಲ್ಲಿ, ಕಾಡಂಚಿನಲ್ಲಿ ಸತ್ತ ಪ್ರಾಣಿಗಳನ್ನು ತಿಂದು ಬದುಕುವುದರಿಂದ ಕಾಡಿನ ಪರಿಸರ ಸ್ವಚ್ಛತೆಗೆ ರಣಹದ್ದುಗಳು ಬೇಕೇಬೇಕು. ರಣಹದ್ದುಗಳನ್ನು ಉಳಿಸಿಕೊಳ್ಳಲು 2025 ರವರೆಗೆ ಕೇಂದ್ರ ಪರಿಸರ ಸಚಿವಾಲಯ ಯೋಜನೆ ಹಾಕಿಕೊಂಡಿದೆ. ಅದರ ಮೊದಲ ಹಂತವೇ ಈ ಸರ್ವೇಕ್ಷಣೆ. ಕಾಡಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಣಹದ್ದುಗಳನ್ನು ಉಳಿಸಲೇ ಬೇಕಿದೆ.

ಅವನತಿಗೆ ನಾಂದಿ ಹಾಡಿದ ಚುಚ್ಚುಮದ್ದು:ರಾಸುಗಳಿಗೆ ನೀಡುತ್ತಿದ್ದ ಡೈಕ್ಲೋಫೆನಾಕ್(Diclofenac) ಎಂಬ ಚುಚ್ಚುಮದ್ದು ರಣಹದ್ದುಗಳ ಅವನತಿಗೆ ಕಾರಣ ಎನ್ನಲಾಗಿದೆ. ಈ ಚುಚ್ಚುಮದ್ದು 2006ರಲ್ಲಿ ನಿಷೇಧಕ್ಕೆ ಒಳಪಟ್ಟಿದೆ. ಡೈಕ್ಲೋಫೆನಾಕ್ ಚುಚ್ಚುಮದ್ದು ಪಡೆದಿದ್ದ ಸತ್ತ ದನಗಳು, ಜಾನುವಾರುಗಳನ್ನು ತಿಂದ ರಣಹದ್ದುಗಳು ಕಿಡ್ನಿ ಸಮಸ್ಯೆಗೆ ಒಳಗಾಗಿ ಗುಂಪುಗುಂಪಾಗಿ ಮೃತಪಟ್ಟಿದ್ದರಿಂದ ಜಟಾಯುಗಳ ಸಂತತಿಗೆ ದೊಡ್ಡ ಹೊಡೆತ ಕೊಟ್ಟಿದೆ. ಕಾಡಿಗೆ ಬೆಂಕಿ ಬೀಳುವುದು ಕೂಡ ಇವುಗಳ ಅವನತಿಗೆ ಮುಖ್ಯ ಕಾರಣ. ಇವೆಲ್ಲ ಕಾರಣಗಳಿಂದ ಕಾಡಿನ ಪ್ರಮುಖ ಪಕ್ಷಿಯೊಂದು ಈಗ ಅವನತಿಗೆ ತಲುಪುತ್ತಿದೆ.

ರಣಹದ್ದು

ಯಾವ ಜಾತಿಯ ರಣಹದ್ದುಗಳಿವೆ?: ಭಾರತದಲ್ಲಿ 9 ಜಾತಿ ರಣಹದ್ದುಗಳಿದ್ದು ಕರ್ನಾಟಕದಲ್ಲಿ ಎರಡು ವಲಸೆ ಬರುವ ರಣಹದ್ದು ಸೇರಿ 6 ರಣಹದ್ದು ಜಾತಿಗಳು ಸಿಗಲಿದೆ. ನೀಲಗಿರಿ ಶ್ರೇಣಿಯಲ್ಲಿ ಮುಖ್ಯವಾಗಿ ಬಿಳಿಬೆನ್ನಿನ ರಣಹದ್ದು, ಕೆಂಪು ತಲೆ ರಣಹದ್ದು, ಇಂಡಿಯನ್ ವಲ್ಚರ್, ಈಜಿಪ್ಷಿಯನ್ ವಲ್ಚರ್ ಕಾಡಿ‌ನ ಹೊರಗೆ ಸಾಮಾನ್ಯವಾಗಿ ಕಾಣಸಿಗಲಿದೆ. ರಣಹದ್ದುಗಳು ಸಾಮಾನ್ಯವಾಗಿ 5 ವರ್ಷಕ್ಕೆ ಒಮ್ಮೆ 1 ಮೊಟ್ಟೆಯನ್ನು ಮಾತ್ರ ಇಡುವುದರಿಂದ ಇವುಗಳ ಸಂತತಿ ಅತ್ಯಂತ ವೇಗವಾಗಿ ಬೆಳೆಯುವುದಿಲ್ಲ. ಹುಲಿಯಷ್ಟೇ ಪ್ರಮುಖವಾಗಿರುವ ರಣಹದ್ದು ಈಗ ಕಣ್ಮರೆಯಾಗುತ್ತಿದೆ.

3 ರಾಜ್ಯಗಳಲ್ಲಿ ಏಕಕಾಲಕ್ಕೆ ಸಮೀಕ್ಷೆ: ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಏಕಕಾಲದಲ್ಲಿ ಜಟಾಯು ಸಮೀಕ್ಷೆ ನಡೆಯಲಿದೆ.‌ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಡಬ್ಲ್ಯೂಸಿಎಸ್( ವನ್ಯಜೀವಿ ಸಂರಕ್ಷಣಾ ಸಂಸ್ಥೆ) ಸಂಸ್ಥೆಯ ಸಹಭಾಗಿತ್ವದಲ್ಲಿ ಫೆ 25 ಹಾಗೂ 26 ರಂದು ಈ ಸಮೀಕ್ಷೆ ನಡೆಯುತ್ತಿದೆ. ಡಬ್ಲ್ಯೂಸಿಎಸ್​ನ ಮುಖ್ಯಸ್ಥ ರಾಜಕುಮಾರ್ ದೇವರಾಜ್ ಅರಸ್ ನೇತೃತ್ವ ವಹಿಸಲಿದ್ದಾರೆ.

ರಣಹದ್ದು

ಸಮೀಕ್ಷೆ ಹೇಗೆ ನಡೆಯಲಿದೆ:ಕಾಡು ಹಾಗೂ ಕಾಡಿನ ಆಚೆ 20 ಸ್ಥಳಗಳನ್ನು ಗುರುತಿಸಿಕೊಂಡು ಕಾಯುವ ಅರಣ್ಯ ಸಿಬ್ಬಂದಿ ರಣಹದ್ದುಗಳ ಹಾರಾಟವನ್ನು ಗಮನಿಸಲಿದ್ದಾರೆ. ರಣಹದ್ದುಗಳ ಗೂಡುಗಳನ್ನು ಪತ್ತೆ ಹಚ್ಚಿ ರಣಹದ್ದುಗಳು ಇರುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ಸತ್ತ ಪ್ರಾಣಿಗಳನ್ನು ರಣಹದ್ದುಗಳು ತಿನ್ನುವುದರಿಂದ ಅವುಗಳ ಬರುವಿಕೆಗೆ ಕಾಯಲಿದ್ದು, ಈ ಮೂಲಕ ರಣಹದ್ದುಗಳ ಅಂದಾಜು ಲೆಕ್ಕವನ್ನು ಹಾಕಲಿದ್ದಾರೆ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ತಿಳಿಸಿದ್ದಾರೆ.

ಇದನ್ನೂ ಓದಿ:ಗಜೇಂದ್ರಗಡ ಬೆಟ್ಟದಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದು ಪತ್ತೆ!

Last Updated : Feb 25, 2023, 3:07 PM IST

ABOUT THE AUTHOR

...view details