ಕರ್ನಾಟಕ

karnataka

By

Published : Jun 13, 2020, 10:17 PM IST

Updated : Jun 13, 2020, 10:26 PM IST

ETV Bharat / state

2 ಬೆರಳಲ್ಲೇ ಬದುಕು ಕಟ್ಟಿಕೊಂಡ ಸ್ವಾಭಿಮಾನಿ.. ಇವರು ಎಳೆನೀರು ಕೊಚ್ಚೋದ್ರಲ್ಲೂ ಜೀವನಕ್ಕೆ ಸ್ಫೂರ್ತಿ!!

ಎರಡು ಬೆರಳಲ್ಲಿ ಮಚ್ಚು ಹಿಡಿಯಲಾಗದೇ ಪದೇಪದೆ ಕೈಯಿಂದ ಬೀಳುತ್ತಿತ್ತು. ಒಂದು ಎಳನೀರು ಕೊಚ್ಚಲು 25 ನಿಮಿಷ ತೆಗೆದುಕೊಂಡು ಇವರ ಹತ್ತಿರ ಎಳನೀರು ಕೊಳ್ಳಲು ಯಾಕಾದ್ರೂ ಬಂದೆವೋ ಎಂಬ ಗ್ರಾಹಕರ ಮೂದಲಿಕೆ ನಡುವೆ ಬರೋಬ್ಬರಿ 6 ತಿಂಗಳ ಸಮಯದಲ್ಲಿ ಚಕಚಕನೇ ಎಳನೀರು ಕೊಚ್ಚುವುದನ್ನು ರೂಢಿಸಿಕೊಂಡರು..

chamarajanagara Inspirational story of a person coconut cutting
ಎರಡು ಬೆರಳಲ್ಲೇ ಎಳನೀರು ಕೊಚ್ಚಿ, ಗ್ರಾಹಕರಿಗೆ ತಮ್ಮ ಕಥೆ ಹೇಳಿ ಬೇಷ್ ಎನಿಸಿಕೊಂಡ ವ್ಯಕ್ತಿಯ ಸ್ಫೂರ್ತಿದಾಯಕ ಕಥೆ

ಚಾಮರಾಜನಗರ :ದೈಹಿಕ, ಮಾನಸಿಕ ಎಲ್ಲಾ ಸರಿಯಿದ್ರೂ ದುಡಿಯಲು ಆಲಸ್ಯ ತೋರುವವರು ಖಂಡಿತಾ ಇವರನ್ನು ನೋಡಲೇಬೇಕು, ಜೀವನ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಗೆ ಬಿದ್ದ ಇವರು ಎರಡು ಬೆರಳಲ್ಲೇ ಎಳನೀರು ಕೊಚ್ಚುವ ಮೂಲಕ ಬದುಕನ್ನು ಹಸನಾಗಿಸಿಕೊಂಡಿದ್ದಾರೆ.

2 ಬೆರಳಲ್ಲೇ ಬದುಕು ಕಟ್ಟಿಕೊಂಡ ಸ್ವಾಭಿಮಾನಿ.. ಇವರು ಎಳೆನೀರು ಕೊಚ್ಚೋದ್ರಲ್ಲೂ ಜೀವನಕ್ಕೆ ಸ್ಫೂರ್ತಿ!!

ಹನೂರಿನ ಗೋಪಿ ಎಂಬ ಎಳನೀರು ವ್ಯಾಪಾರಿ ಅವಘಡವೊಂದರಲ್ಲಿ ಮೂರು ಬೆರಳುಗಳನ್ನು ಕಳೆದುಕೊಂಡ್ರೂ ಸತತ ಪ್ರಯತ್ನ, ಮಕ್ಕಳನ್ನು ಓದಿಸಲೇಬೇಕೆಂಬ ಹಠಕ್ಕೆ ಎರಡು ಬೆರಳಲ್ಲೇ ಎಳನೀರು ಕೊಚ್ಚುವುದಲ್ಲಿ ನಿಸ್ಸೀಮರಾಗಿದ್ದಾರೆ. ಜೀವನವೂ ಈಗ ಎಳನೀರಿನಷ್ಟೇ ಸಿಹಿಯಾಗಿದೆ. ಆಲೆಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಅವರಿಗೆ 2000 ಇಸವಿಯ ನ.11ರಂದು ಒಂದು ಕರಾಳ ದಿನ. ಮಾತಿನ ಭರಾಟೆ ನಡುವೆ ಗಾಣಕ್ಕೆ ಕೈ ಕೊಟ್ಟು ಮೂರು ಬೆರಳುಗಳನ್ನು ಕಳೆದುಕೊಂಡ ಅವರಿಗೆ ಜೀವನ ಬಾಗಿಲು ಮುಚ್ಚಿದ ಅನುಭವಾಗಿತ್ತು.

3 ತಿಂಗಳು ಮನೆಯಲ್ಲೇ ಕುಳಿತ ಗೋಪಿ ಅವರಿಗೆ ಗರ್ಭಿಣಿ ಪತ್ನಿಯನ್ನು ಕಂಡು ಜೀವನ ಸಾಗಿಸಲೇಬೇಕು, ಮಕ್ಕಳನ್ನು ಓದಿಸಲೇಬೇಕೆಂಬ ಹಠಕ್ಕೆ ಬಿದ್ದು ಪೆಪ್ಪರ್‌ಮೆಂಟ್‌, ಬಿಸ್ಕೇಟ್‌ ವ್ಯಾಪಾರ ಶುರು ಮಾಡಿದರು. ಅದು ಕೈ ಹತ್ತದೇ, ಕಲ್ಲು ಗಣಿಯಲ್ಲಿ3 ವರ್ಷ ಒಂದೇ ಕೈಯಲ್ಲಿ ದುಡಿದರೂ ಕೂಡ ಮಾಡಿಕೊಂಡಿದ್ದ ಸಾಲ ತೀರಿಸುವಷ್ಟು ದುಡಿಮೆ ಬಾರದ ಕಾರಣ ಮತ್ತೆ ಮನೆಗೆ ಹಿಂತಿರುಗಿ‌ 2003ರಲ್ಲಿ ಎಳನೀರು ವ್ಯಾಪಾರಕ್ಕೆ ಇಳಿದರು.

ಕೈ ಜಾರುತ್ತಿದ್ದ ಮಚ್ಚು- ಎಳನೀರು ವ್ಯಾಪಾರಕ್ಕೆ ಇಳಿದ ಗೋಪಿ ಪ್ರಾರಂಭದ ದಿನಗಳು ನಿಜಕ್ಕೂ ಭ್ರಮನಿರಸನವಾಗಿದ್ದವು. ಎರಡು ಬೆರಳಲ್ಲಿ ಮಚ್ಚು ಹಿಡಿಯಲಾಗದೇ ಪದೇಪದೆ ಕೈಯಿಂದ ಬೀಳುತ್ತಿತ್ತು. ಒಂದು ಎಳನೀರು ಕೊಚ್ಚಲು 25 ನಿಮಿಷ ತೆಗೆದುಕೊಂಡು ಇವರ ಹತ್ತಿರ ಎಳನೀರು ಕೊಳ್ಳಲು ಯಾಕಾದ್ರೂ ಬಂದೆವೋ ಎಂಬ ಗ್ರಾಹಕರ ಮೂದಲಿಕೆ ನಡುವೆ ಬರೋಬ್ಬರಿ 6 ತಿಂಗಳ ಸಮಯದಲ್ಲಿ ಚಕಚಕನೇ ಎಳನೀರು ಕೊಚ್ಚುವುದನ್ನು ರೂಢಿಸಿಕೊಂಡರು.

ಬದುಕನ್ನು ಸರಿದಾರಿಗೆ ತರಿಸಿಕೊಂಡರು. ಎಳನೀರು ಕೊಚ್ಚುವುದನ್ನೇನೋ ಕಲಿತರು. ಆದರೆ, ಇವರಲ್ಲಿಗೆ ಬರುತ್ತಿದ್ದ ಗ್ರಾಹಕರು ಇವರ ಸ್ಥಿತಿ ಕಂಡು ಈತನಿಗೆ ರೋಗವಿದೆ ಎಂದು ಎಳನೀರು ಕುಡಿಯಲು ಹಿಂದೇಟು ಹಾಕುತ್ತಿದ್ದರು. ಇನ್ನು, ಹಲವರು ಇವರು ರೌಡಿಸಂನಲ್ಲಿದ್ದಿರಬೇಕು, ಅದಕ್ಕೆ ಬೆರಳು ತುಂಡಾಗಿದೆ ಎಂದು ಭಾವಿಸಿದ್ದರಂತೆ. ಬರುವ ಗ್ರಾಹಕರಿಗೆ ತಮ್ಮ ಕಥೆ ಹೇಳುವ ಮೂಲಕ ಎಲ್ಲರಿಂದಲೂ ಭೇಷ್ ಎನಿಸಿಕೊಂಡೆ, ಎಳನೀರು ಕಾಯಿ ತಿನ್ನಲು ಅಸಹ್ಯ ಪಟ್ಡವರಿಗೆ ನನ್ನ ಕಷ್ಟದ ಕಥೆ ಹೇಳಿ ಮನವರಿಕೆ ಮಾಡಿಕೊಟ್ಟೆ ಎನ್ನುತ್ತಾರೆ ಗೋಪಿ.

ಸದ್ಯ ಇವರಿಬ್ಬರ ಮಕ್ಕಳಲ್ಲಿ ಓರ್ವ ಪ್ಯಾರಾ ಮೆಡಿಕಲ್ ಮಾಡುತ್ತಿದ್ದು, ಮತ್ತೋರ್ವ ‌ಐಟಿಐ ಮುಗಿಸಿದ್ದಾನೆ. ಊಟ, ಮಕ್ಕಳ ವಿದ್ಯಾಭ್ಯಾಸಕ್ಕೆ ನನ್ನ ಈ ಎರಡು ಬೆರಳಿದಂಲೇ‌ ದುಡಿದೆ, ಯಶಸ್ವಿಯೂ ಆಗಿದ್ದೇನೆ ಎಂದು ನಗೊಮೊಗದಿಂದಲೇ ಉತ್ತರಿಸುತ್ತಾರೆ ಗೋಪಿ.

Last Updated : Jun 13, 2020, 10:26 PM IST

ABOUT THE AUTHOR

...view details