ಕರ್ನಾಟಕ

karnataka

By

Published : Dec 29, 2021, 12:57 PM IST

ETV Bharat / state

ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ ಕಣ್ತುಂಬಿಕೊಂಡ ಚಾಮರಾಜನಗರ ರೈತರು

ಕಳೆದ ಮೂರು ದಿನಗಳಿಂದ ಪ್ರವಾಸದಲ್ಲಿರುವ ಚಾಮರಾಜನಗರ ಜಿಲ್ಲೆಯ ರೈತರು, ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.

Chamarajanagar farmers
ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ರೈತರು

ಚಾಮರಾಜನಗರ: ತೆಲಂಗಾಣ ರಾಜ್ಯವು ಅನುಷ್ಠಾನಗೊಳಿಸಿರುವ ವಿಶ್ವದ ಅತಿ ದೊಡ್ಡ ಏತ ನೀರಾವರಿ ಕಾಳೇಶ್ವರಂ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯ ರೈತರು ನೋಡಿ ಹರ್ಷ ವ್ಯಕ್ತಪಡಿಸುವ ಜೊತೆಗೆ ರೈತರಿಗೆ ಆಗಿರುವ ಅನುಕೂಲಗಳನ್ನು ಪರಾಮರ್ಶಿಸಿದರು.

ಕಳೆದ ಮೂರು ದಿನಗಳಿಂದ ಕಾಳೇಶ್ವರಂ ಯೋಜನಾ ಪ್ರದೇಶದ ಪ್ರವಾಸದಲ್ಲಿರುವ ರೈತರು ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಇವರು 2014ರಲ್ಲಿ ಚಾಮರಾಜನಗರದಲ್ಲಿ ಮೆಗಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯು ಯಶಸ್ವಿಯಾಗಿ ಜಾರಿ ಮಾಡಿರುವ ಆಲಂಬೂರ್ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ ನೀರು ಅಭಿವೃದ್ಧಿ ಸಂರಕ್ಷಣಾ ಸಮಿತಿ ಸದಸ್ಯರು ಕೂಡ ಹೌದು.

ಚಾಮರಾಜನಗರದ ಆಲಂಬೂರು ಸಮೀಪ ಅನುಷ್ಠಾನಗೊಂಡಿರುವ ಕೆರೆ ತುಂಬಿಸುವ ಯೋಜನೆ ಯಶಸ್ಸಿನಿಂದ ಲಾಭ ಪಡೆದುಕೊಂಡಿರುವ ಇಲ್ಲಿನ ರೈತರ ತಂಡವು ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಮತ್ತು ಭೂತಲದಲ್ಲಿ ನಿರ್ಮಾಣಗೊಂಡಿರುವ ಗಾಯತ್ರಿ ಪಂಪ್‌ಹೌಸ್ ಸೇರಿದಂತೆ ಯೋಜನೆಯ ಅಳತೆ- ಆಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ರೈತರು

ಏನಿದು ಕಾಳೇಶ್ವರಂ? :

ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಳೇಶ್ವರಂ ಏತ ನೀರಾವತಿ ಯೋಜನೆ ಜಾರಿಯಲ್ಲಿ ದೇಶಿಯ ನಿರ್ಮಿತ ಬೃಹತ್ ಮೋಟಾರ್‌ಗಳು, ಭೂತಳದಲ್ಲಿ ಪಂಪ್‌ಹೌಸ್‌ಗಳ ನಿರ್ಮಾಣ, ಅತಿ ಹೆಚ್ಚು ಪ್ರದೇಶದಲ್ಲಿ ಕೃಷಿಗೆ ಅವಕಾಶ, ಕುಡಿಯುವ ನೀರು, ಮೀನುಗಾರಿಕೆ, ಕೈಗಾರಿಕೆಗೆ ನೀರು, ಪ್ರವಾಸೋದ್ಯಮಕ್ಕೆ ಅವಕಾಶ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಅನುಕೂಲವಾಗಿರುವುದಲ್ಲದೆ, ಹಲವು ಜಾಗತಿಕ ದಾಖಲೆಗಳಿಗೆ ಸಾಕ್ಷಿಯಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಿಂದ ಗುರುತ್ವಾಕರ್ಷಣ ದಿಕ್ಕಿಗೆ ಹರಿಯುತ್ತಿದ್ದಗೋದಾವರಿ ನದಿ ನೀರನ್ನು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಭೂತಲದ ಪಂಪ್‌ಹೌಸ್‌ಗಳಿಗೆ ಹರಿಸಿ 600 ಅಡಿಗಳಷ್ಟು ಎತ್ತರಕ್ಕೆ ಪಂಪ್ ಮಾಡುವ ಮೂಲಕ ವ್ಯರ್ಥವಾಗುತ್ತಿದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಭೂತಲದಲ್ಲಿ ಬಹುಮಹಡಿ ಕಟ್ಟಡವನ್ನು ನಾಚಿಸುವಂತೆ ನಿರ್ಮಿಸಿರುವ ಬೃಹತ್ತಾದ ಪಂಪ್‌ಹೌಸ್ ಮೂಲಕ ಎತ್ತುವಳಿ ಮಾಡಲಾಗುವ ನೀರನ್ನು ಅಣೆಕಟ್ಟೆಗಳಲ್ಲಿ ಸಂಗ್ರಹಿಸಿ, ಕಾಲುವೆ ಮತ್ತು ಪೈಪ್‌ಗಳ ಮೂಲಕ ಕೆರೆಗಳಿಗೆ ಹರಿಸಿ ಅಲ್ಲಿಂದ ನಾನಾ ಕಾರಣಗಳಿಗೆ ನೀರನ್ನು ಉಪಯೋಗಿಸಲಾಗುತ್ತಿದೆ. ಕಾಳೇಶ್ವರಂ ಏತ ನೀರಾವರಿ ಯೋಜನೆ ಯಶಸ್ವಿ ಜಾರಿಗೆ ಅನುವಾಗುವಂತೆ ಎಂ.ಇ.ಐ.ಎಲ್ 15 ಬೃಹದಾಕಾರದ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದು, 5,159 ಮೆಗಾ ವ್ಯಾಟ್ ಪಂಪಿಂಗ್ ಸಾಮರ್ಥ್ಯದ 104 ಪಂಪ್‌ಗಳನ್ನು ಅಳವಡಿಸಿದೆ. ಈ ಪ್ರಮಾಣದ ನೀರು ಎತ್ತುವಳಿ ಸಾಧನಗಳ ಅಳವಡಿಕೆ ವಿಶ್ವದಲ್ಲೇ ಪ್ರಪ್ರಥಮ ಎನ್ನಲಾಗಿದೆ.

ಗಾಯಿತ್ರಿ ಭೂತಳ ಪಂಪ್‌ಹೌಸ್ ನಿರ್ಮಾಣ:

ಪ್ರತಿ ನಿತ್ಯ 2 ಟಿಎಂಸಿ ನದಿ ನೀರನ್ನು ಎತ್ತುವಳಿ ಮಾಡುವ ಸಲುವಾಗಿ ಯೋಜನೆಯ ಪ್ಯಾಕೇಜ್-8 ರಡಿಯಲ್ಲಿ ಗಾಯಿತ್ರಿ ಭೂತಳ ಪಂಪ್‌ಹೌಸ್ ನಿರ್ಮಿಸಿದೆ. ಇದೇ ರೀತಿ ಮೇಡಿಘಡ್ಡ ಪಂಪ್ ಹೌಸ್ (17 ಮೋಟಾರ್), ಅನ್ನಾರಾಂ ಸರಸ್ವತಿ (12 ಮೋಟಾರ್), ಸುಂಡಿಲ ಪಾರ್ವತಿ (14), ಅನ್ನಪೂರ್ಣ (4), ರಂಗನಾಯಕ ಸಾಗರ (4), 52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕೊಂಡಪೋಚಮ್ಮ ಪ್ಯಾಕೇಜ್‌ನಡಿ ಅಕ್ಕರಾಮ್ ಮತ್ತು ಮರುಕೋಕ್ಲು ಎಂಬಲ್ಲಿ ತಲಾ ಎರಡು ಮೋಟಾರ್‌ಗಳನ್ನು ಅಳವಡಿಸಲಾಗಿದೆ.

ಮುಂದಿನ 10 ವರ್ಷಗಳಲ್ಲಿ ತೆಲಂಗಾಣದ ಚಿತ್ರಣವೇ ಬದಲು:

ಹೀಗೆ ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಯಶಸ್ವಿಯಾಗಿ ಜಾರಿ ಆಗಿರುವ ಕಾಳೇಶ್ವರಂ ಯೋಜನೆ ಮುಂದಿನ 10 ವರ್ಷಗಳಲ್ಲಿ ತೆಲಂಗಾಣ ರಾಜ್ಯದ ಚಿತ್ರಣವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯನ್ನು ಖುದ್ದು ಕಂಡ ರಾಜ್ಯದ ರೈತರು ಕರ್ನಾಟಕ ಸೇರಿದಂತೆ ದೇಶದ ಇತರೆಡೆಗಳಲ್ಲಿ ಇಂತಹ ಯೋಜನೆ ಮೂಲಕ ಕೃಷಿಗೆ ಒತ್ತು ನೀಡಬೇಕೆಂದು ಆಗ್ರಹಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆಯ ಪ್ರತೀಕವಾಗಿದ್ದ ಈ ಬೃಹತ್ ಏತ ನೀರಾವರಿ ಯೋಜನೆ ಬಗ್ಗೆ ಡಿಸ್ಕವರಿ ಚಾನೆಲ್ ಸಹ ವಿಶೇಷ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿದ್ದನ್ನು ಸ್ಮರಿಸಬಹುದು.

ABOUT THE AUTHOR

...view details