ಚಾಮರಾಜನಗರ: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆ ಆಯ್ಕೆಯಾಗಿದೆ. ರಾಜ್ಯದಿಂದ ಆಯ್ಕೆ ಆದ ಏಕೈಕ ಜಿಲ್ಲೆಯಾಗಿದ್ದು ಸಾವಿರಾರು ವಿಶೇಷಚೇತನರಿಗೆ ಇಂದು ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಅಲ್ಕಿಮೊ ಸಂಸ್ಥೆ, ಜಿಲ್ಲಾಡಳಿತ ಸಂಯುಕ್ತವಾಗಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 1693 ವಿಶೇಷ ಚೇತನರಿಗೆ ಡಿ. 24ರಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಮತ್ತು ಸ್ಥಳೀಯ ಶಾಸಕರುಗಳು ವಿತರಣೆ ಮಾಡಿದರು.
ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ನಡೆದ ದಕ್ಷಿಣ ಭಾರತದ ಬೃಹತ್ ಕಾರ್ಯಕ್ರಮ ಇದಾಗಿದ್ದು ಟ್ರೈಸಿಕಲ್, ಶ್ರವಣ ಸಾಧನ, ವಿಶೇಷ ಚೇತನ ಮಕ್ಕಳಿಗೆ ಕಿಟ್ ಸೇರಿದಂತೆ 16 ಬಗೆಯ 2755 ಸಾಧನಗಳನ್ನು ವಿತರಿಸಲಾಗಿದೆ, ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 1.20 ಕೋಟಿ ರೂ.ಗಳಾಗಿದೆ.
ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದರ ವಿಶೇಷ ಕಾಳಜಿ ಹಾಗೂ ಮುತುವರ್ಜಿಯಿಂದ ಜಿಲ್ಲೆಯು ರಾಜ್ಯದಲ್ಲಿ ಆಯ್ಕೆಯಾಗಿದ್ದು ಪ್ರತಿ ಊರುಗಳಲ್ಲಿ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಸಾಧನಗಳನ್ನು ವಿತರಿಸಲಾಯಿತು.