ಕರ್ನಾಟಕ

karnataka

By

Published : Jan 22, 2023, 7:06 AM IST

ETV Bharat / state

ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್‌ ಅಪಘಾತಕ್ಕೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ. ಮೈಸೂರಿನ ಟಿ. ನರಸೀಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

chamarajanagar
ಖಾಸಗಿ ಬಸ್ ಪಲ್ಟಿ

ಚಾಮರಾಜನಗರ:ಜಿಲ್ಲೆಯ ಮೂಗೂರು ಕ್ರಾಸ್​ ಬಳಿ ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಖಾಸಗಿ ಬಸ್​ ಪಲ್ಟಿಯಾಗಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಉದಯರಂಗ ಎಂಬ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿ 50 ರಿಂದ 60 ಜನ ಪ್ರಯಾಣಿಕರಿದ್ದರು. ಈ ಪೈಕಿ 30 ರಿಂದ 35 ಜನರಿಗೆ ಗಾಯಗಳಾಗಿವೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳ ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದು ಚಾಮರಾಜನಗರ ಪೊಲೀಸರು ಮೈಸೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಇದನ್ನೂ ಓದಿ:ದಟ್ಟ ಮಂಜು, ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಟ್ರಕ್​; ಟಿಪ್ಪರ್​ ಮನೆಗೆ ನುಗ್ಗಿ ಮೂವರು ಸಾವು

ಮಂಡ್ಯದಲ್ಲಿ ಬೈಕ್ ಅಪಘಾತ:ಬೆಳಗಿನ ಜಾವ ಮಂಜು ಮುಸುಕಿ ರಸ್ತೆ ಗುಂಡಿ ಕಾಣದೆ ಎರಡು ಬೈಕ್​ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಜಿಲ್ಲೆಯ ಕೊಮ್ಮೇರಹಳ್ಳಿ ಗ್ರಾಮದ ಬಳಿ ಶನಿವಾರ ನಡೆದಿದೆ. ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೆರೆಗೋಡು ಗ್ರಾಮದ ಶಂಕ್ರೇಗೌಡ (58) ಎಂಬವರು ಪತ್ನಿಯೊಂದಿಗೆ ಮಂಡ್ಯದಿಂದ ಕೆರೆಗೋಡು ಗ್ರಾಮಕ್ಕೆ ತೆರಳುತ್ತಿದ್ದರು. ಬೆಳಗಿನ ಜಾವ ವಿಪರೀತ ಮಂಜು ಕವಿದಿದ್ದು ರಸ್ತೆ ಗುಂಡಿ ಕಾಣದೆ ಎದುರಿನಿಂದ ಬರುತ್ತಿದ್ದ ಬೈಕ್​ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಕೊಪ್ಪ ಸಕ್ಕರೆ ಕಾರ್ಖಾನೆಯ ಉದ್ಯೋಗಿ ಮಹೇಂದ್ರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಮಂಡ್ಯ ವಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ:ಪಂತ್ ಕಾರು ಅಪಘಾತಕ್ಕೆ ಕಾರಣವಾಗಿದ್ದ ಕಾಲುವೆ ತೆರವು ಕಾರ್ಯ: ಅನಾಹುತದ ನಂತರ ಎಚ್ಚೆತ್ತ ನೀರಾವರಿ ಇಲಾಖೆ

ಚಿಕ್ಕಮಗಳೂರಿನಲ್ಲಿ ಮರಕ್ಕೆ ಕಾರು ಡಿಕ್ಕಿ:ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿರಣ್(32) ಮತ್ತು ನಾಗರಾಜ್​(40) ಮೃತಪಟ್ಟಿದ್ದರು. ಕಿರಣ್ ಅಜ್ಜಂಪುರ ತಾಲೂಕಿನ ಶಿವನಿಯ ಮೆಸ್ಕಾಂನಲ್ಲಿ ಜೆ.ಇ.ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವರು. ಇವರಿಗೆ ಮದುವೆ ನಿಶ್ಚಯವಾಗಿದ್ದು, ಫೆಬ್ರವರಿ 8 ರಂದು ವಿವಾಹ ನಡೆಯುವುದಿತ್ತು. ಆದರೆ ತರೀಕೆರೆಯಿಂದ ಶಿವನಿಗೆ ಹೋಗುವ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ಮರಕ್ಕೆ ಡಿಕ್ಕಿ ಹೊಡೆದಿದೆ. ಕಿರಣ್ ಜೊತೆಗಿದ್ದ ಅಜ್ಜಂಪುರ ಮೂಲದ 40 ವರ್ಷದ ನಾಗರಾಜ್ ಕೂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರು - ಲಾರಿ ಮುಖಾಮುಖಿ ಡಿಕ್ಕಿ: ವಿವಾಹದ ಫೋಟೋ ಶೂಟ್​ಗೆ ತೆರಳುತ್ತಿದ್ದ ನಾಲ್ವರ ಸಾವು, ಓರ್ವನಿಗೆ ಗಾಯ

ABOUT THE AUTHOR

...view details