ಕರ್ನಾಟಕ

karnataka

ETV Bharat / state

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ಸ್ನೈಪರ್ ಡಾಗ್ ಝಾನ್ಸಿ ಅಪಘಾತದಲ್ಲಿ ಸಾವು.. - etv bharat kannada

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಧಿಕಾರಿಗಳಿಗೆ ನೆರವಾಗಬೇಕಿದ್ದ ಸ್ನೈಪರ್ ಡಾಗ್ ಝಾನ್ಸಿ ಇತ್ತೀಚೆಗೆ ಅಪಘಾತದಲ್ಲಿ ಅಪಘಾತದಲ್ಲಿ ಮೃತಪಟ್ಟಿದೆ.

brt-tiger-reserve-sniper-dog-jhansi-dies-in-accident
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದ ಸ್ನೈಪರ್ ಡಾಗ್ ಝಾನ್ಸಿ ಅಪಘಾತದಲ್ಲಿ ಸಾವು

By

Published : Jan 7, 2023, 5:57 PM IST

Updated : Jan 7, 2023, 6:23 PM IST

ಚಾಮರಾಜನಗರ: ಬಿಆರ್‌ಟಿಯಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಬೇಕಿದ್ದ, ಅರಣ್ಯ ಅಪರಾಧಗಳನ್ನು ಪತ್ತೆಹಚ್ಚಿ ಮಹಾನ್ ಪತ್ತೆದಾರಿ ಎನಿಸಿಕೊಳ್ಳಬೇಕಿದ್ದ ಸ್ನೈಪರ್ ಡಾಗ್ ಝಾನ್ಸಿ ಇತ್ತೀಚೆಗೆ ಅಪಘಾತದಲ್ಲಿ ಅಸುನೀಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಸೆಂಬರ್​ 30ರಂದು ಪುಣಜನೂರು ಕಚೇರಿ ಎದುರು ಇರುವ ರಸ್ತೆಯಲ್ಲಿ ಬೀದಿನಾಯಿ ಅಟ್ಟಿಸಿಕೊಂಡು ಹೋದ ಝಾನ್ಸಿಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಠಿಣ ತರಬೇತಿ ಪಡೆದಿದ್ದ ಝಾನ್ಸಿ:ಸರ್ಕಾರೇತರ ಸಂಸ್ಥೆಯಾದ ಟ್ರಾಫಿಕ್ ಮತ್ತು ವಿಶ್ವ ವನ್ಯಜೀವಿ ನಿಧಿ(ವರ್ಲ್ಡ್​​ ವೈಲ್ಡ್​​ಲೈಫ್​ ಫಂಡ್​​​) ಇಂಡಿಯಾ ವತಿಯಿಂದ ಚಂಡೀಗಢ ಇಂಡೋ - ಟಿಬೇಟಿನ್ ಬಾರ್ಡರ್ ಪೊಲೀಸ್ ಪೋರ್ಸ್ (ಐಟಿಬಿಪಿ) ನಲ್ಲಿ ಝಾನ್ಸಿ ಸುಮಾರು ಆರೇಳು ತಿಂಗಳು ಕಠಿಣ ತರಬೇತಿ ಪಡೆದು ಬಂದಿದ್ದಳು. ಝಾನ್ಸಿ ನೋಡಿಕೊಳ್ಳಲು ಅರಣ್ಯ ಇಲಾಖೆ ಗಾರ್ಡ್ ಬಸವರಾಜುಗೆ ಹ್ಯಾಂಡ್ಲರ್ ತರಬೇತಿಯನ್ನೂ ನೀಡಲಾಗಿತ್ತು.

ಝಾನ್ಸಿಗೆ ತರಬೇತಿಯಲ್ಲಿ ಬಾಂಬ್ ಪತ್ತೆ, ದುಷ್ಕರ್ಮಿಗಳು ಮತ್ತು ವಸ್ತುಗಳ ವಾಸನೆ ಗ್ರಹಿಸುವಿಕೆ, ಅಪರಾಧಿಗಳ ಬೆನ್ನತ್ತುವ ಚಾಣಾಕ್ಷತೆ ಬಗ್ಗೆ ಕಲಿಸಲಾಗಿತ್ತು. ಈ ತರಬೇತಿಯಲ್ಲಿ ಹಲವು ಶ್ವಾನಗಳು ಮತ್ತು ಹ್ಯಾಂಡ್ಲರ್ಸ್‌ಗಳು ಭಾಗವಹಿಸಿದ್ದರು. ಭಾರತೀಯ ರೈಲ್ವೆಯ ದಕ್ಷಿಣ ಮತ್ತು ಪಶ್ಚಿಮ ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ ಅರಣ್ಯ ಇಲಾಖೆ, ಉತ್ತರಪ್ರದೇಶ, ಗುಜರಾತ್, ತಮಿಳುನಾಡು ಅರಣ್ಯ ಇಲಾಖೆಗೆ ಒಂದೊಂದು ಶ್ವಾನ ನೀಡಲಾಗಿತ್ತು. ಅದರಂತೆ, ಕರ್ನಾಟಕದಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಝಾನ್ಸಿ ಸಿಕ್ಕಿದ್ದಳು.

2021ರ ನವೆಂಬರ್‌ನಲ್ಲಿ ಅರಣ್ಯ ಇಲಾಖೆ ಕಚೇರಿಗೆ ಬಂದ ಝಾನ್ಸಿ ಎದುರು ಅಂದಿನ ಹುಲಿ ಯೋಜನೆ ನಿರ್ದೇಶಕ ಸಂತೋಷ್‌ ಕುಮಾರ್ ನಿಂತಿದ್ದರು. ಹ್ಯಾಂಡ್ಲರ್ ಸೂಚನೆ ಕೊಟ್ಟ ಕೂಡಲೇ ತನ್ನ ಗ್ರಹಿಕಾ ಶಕ್ತಿ ಪ್ರದರ್ಶಿಸಿ, ಝಾನ್ಸಿ ಅಧಿಕಾರಿಗಳಿಗೆ ಗೌರವ ಸಲ್ಲಿಸಿದ್ದಳು. ಈ ವಿಡಿಯೋ ಇಂದಿಗೂ ಬಿಆರ್‌ಟಿ ಅರಣ್ಯ ಇಲಾಖೆಯ ಟ್ವಿಟರ್‌ನಲ್ಲಿದೆ. ಆದರೆ, ಕೆಲವು ದಿನಗಳ ಹಿಂದೆ ಮೃತಪಟ್ಟ ಝಾನ್ಸಿಗೆ ಸಂತಾಪ ಸಲ್ಲಿಸುವ ಯಾವುದೇ ಪೋಸ್ಟ್ ಕೂಡ ಇಲ್ಲ.

ಭವಿಷ್ಯದ ಭರವಸೆಯಾಗಿದ್ದ ಝಾನ್ಸಿ:ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈ ಹಿಂದೆ ಶ್ವಾನ 'ರಾಣಾ' ಕಳ್ಳ ಬೇಟೆಗಾರರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಹಲವು ಕ್ಲಿಷ್ಟಕರ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿತ್ತು. ಕಳ್ಳ ಬೇಟೆಗಾರರನ್ನು ಬಂಧಿಸಲು ನೆರವಾಗಿತ್ತು. ವನ್ಯಮೃಗಗಳ ಸೆರೆ ಕಾರ್ಯಾಚರಣೆಯಲ್ಲೂ ಭಾಗವಹಿಸಿ ತನ್ನ ಚಾಣಾಕ್ಷತೆ ತೋರಿತ್ತು. ನಿವೃತ್ತಿ ಅಂಚಿನಲ್ಲಿದ್ದರೂ ರಾಣಾ ಅತ್ಯುತ್ತಮ ಸೇವೆ ಸಲ್ಲಿಸಿತ್ತು. ಇದರಂತೆಯೇ ಬಿಆರ್‌ಟಿಯಲ್ಲಿ ಝಾನ್ಸಿ ಭವಿಷ್ಯದ ಭರವಸೆಯಾಗಿತ್ತು. ಈ ಅರಣ್ಯಕ್ಕೆ ಈವರೆಗೂ ತರಬೇತಿ ಪಡೆದ ಶ್ವಾನಗಳಿರಲಿಲ್ಲ. ಇದೇ ಮೊದಲ ಬಾರಿಗೆ ಝಾನ್ಸಿ ಆಗಮಿಸಿತ್ತು. ಬಿಆರ್‌ಟಿಗೆ ಶ್ವಾನಬಲ ಬಂದಿತ್ತು. ಝಾನ್ಸಿ ಇನ್ನೂ ಯಾವುದೇ ಕಾರ್ಯಾಚರಣೆಗೆ ಇಳಿದಿರಲಿಲ್ಲ. ಅಷ್ಟರಲ್ಲೇ ಅಪಘಾತದಲ್ಲಿ ಮೃತಪಟ್ಟಿದೆ.

ಇದನ್ನೂ ಓದಿ:'ರಾಣಾ'ನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ: ಪತ್ತೆ ಕಾರ್ಯದಲ್ಲಿ ಪ್ರಚಂಡ ಅರಣ್ಯ ಇಲಾಖೆಯ ಈ ಶ್ವಾನ!

ಡ್ರಗ್ಸ್​ ಪೆಡ್ಲರ್​ ಮಹಿಳೆ ಹಿಡಿದುಕೊಟ್ಟ ಶ್ವಾನ:ಇತ್ತೀಚೆಗೆ ಉಗಾಂಡಾದಿಂದ ಮಹಿಳೆಯೊಬ್ಬಳು ರಹಸ್ಯವಾಗಿ ಸಾಗಿಸುತ್ತಿದ್ದ ಅಫೀಮನ್ನು ಪೊಲೀಸ್​ ಶ್ವಾನ ಪತ್ತೆ ಹಚ್ಚಿತ್ತು. ಶ್ವಾನದ ಕ್ಷಿಪ್ರ ಕಾರ್ಯಾಚರಣೆಯಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ 5.35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಲಾಗಿತ್ತು. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಉಗಾಂಡಾ ಮಹಿಳೆಯ ಬ್ಯಾಗೇಜ್​ನಲ್ಲಿ ಡ್ರಗ್ಸ್​ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು.

ಮಹಿಳೆಯ ಬ್ಯಾಗೇಜ್​​ಅನ್ನು ಮೂಸಿದ ಪೊಲೀಸ್​ ಶ್ವಾನ ಅದರಲ್ಲಿನ ಅಫೀಮು ಪತ್ತೆ ಮಾಡಿತ್ತು. ಕಾಟನ್​ ಬ್ಯಾಗೇಜ್​ನಲ್ಲಿ ಒಟ್ಟಾರೆ 5.35 ಕೋಟಿ ರೂಪಾಯಿ ಮೌಲ್ಯದ 1542 ಗ್ರಾಂ ಮೆಥಾಕ್ವಾಲೊನ್ ಮತ್ತು 644 ಗ್ರಾಂ ಹೆರಾಯಿನ್​ ಕಂಡುಬಂದಿತ್ತು. ಈ ಸಂಬಂಧ ಮಹಿಳೆಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:ಒಡೆಯನ ಬರುವಿಕೆಗೆ ಕಾಯ್ದು ಅಸುನೀಗಿದ ಶ್ವಾನ.. ಶಿರಸಿಯಲ್ಲೊಂದು ಮನಕಲುಕುವ ಘಟನೆ

Last Updated : Jan 7, 2023, 6:23 PM IST

ABOUT THE AUTHOR

...view details