ಚಾಮರಾಜನಗರ:ಬಿಜೆಪಿ ನೀತಿಗಳು, ಆಡಳಿತ ವೈಖರಿ, ಸಂಘರ್ಷದ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಸೆ.30 ರಂದು ಗುಂಡ್ಲುಪೇಟೆ ಮೂಲಕ ಆರಂಭಗೊಳ್ಳಲಿದೆ. ಕೇರಳದ ವೈನಾಡು (ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸತ್ ಕ್ಷೇತ್ರ) ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ.
ಕಾರ್ನರ್ ಮೀಟಿಂಗ್: ಸೆ.30 ರಂದು ಗುಂಡ್ಲುಪೇಟೆಯಲ್ಲಿ ಆರಂಭವಾಗುವ ಯಾತ್ರೆ ಮಧ್ಯಾಹ್ನದ ಊಟಕ್ಕೂ ಮುನ್ನ ಬೆಂಡಗಳ್ಳಿಯಲ್ಲಿ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ನಡೆಸುವರು. ಇದಾದ ನಂತರ ಬೇಗೂರು ಸಮೀಪ ಮೊದಲ ದಿನ ವಾಸ್ತವ್ಯ ಹೂಡಲಿದ್ದು, ಸಂಜೆ ಹೊತ್ತಿಗೆ ವಕೀಲರು, ವಿದ್ಯಾರ್ಥಿಗಳು, ಚಿಂತಕರು, ಕಲಾವಿದರೊಟ್ಟಿಗೆ ರಾಗಾ ಸಂವಾದ ನಡೆಸಲಿದ್ದಾರೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇರುವ ಹಿನ್ನೆಲೆ ನಂಜನಗೂಡು ತಾಲೂಕಿನ ಬದನವಾಳುವಿಗೆ ರಾಹುಲ್ ಗಾಂಧಿ ಭೇಟಿ ಕೊಡಲಿದ್ದಾರೆ. ಮಹಾತ್ಮ ಗಾಂಧೀಜಿ ಬದನವಾಳುವಿಗೆ ಬಂದು ಖಾದಿ ಉದ್ಯಮವನ್ನು ಉತ್ತೇಜಿಸಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ್ದರು.