ಕರ್ನಾಟಕ

karnataka

ರಾಜ್ಯದಲ್ಲಿ ಚಾಮರಾಜನಗರದಲ್ಲೇ ಹುಲಿಗಳ ಸಂಖ್ಯೆ ಅಧಿಕ... ಗಿರಿಜನರ ದೊಡ್ಡರಾಯ ಜಿಲ್ಲೆಗೆ ಕಳಶಪ್ರಾಯ!

By

Published : Jul 29, 2020, 11:49 AM IST

ಕರ್ನಾಟಕದಲ್ಲಷ್ಟೇ ಅಲ್ಲದೇ ದಕ್ಷಿಣ ಭಾರತದ ಅತಿದೊಡ್ಡ ಮತ್ತು ಮೊದಲ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಅಲ್ಲದೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ಕೀರ್ತಿಗೆ ಚಾಮರಾಜನಗರ ಪಾತ್ರವಾಗಿದೆ.

Malai Mahadeshwara Wildlife Sanctuary
ಸುಧಾರಣೆಯತ್ತ ಹುಲಿ ಸಂತತಿ: ಮಲೈ ಮಹದೇಶ್ವರ ವನ್ಯಜೀವಿ ಧಾಮದಲ್ಲಿವೆ 27 ಹುಲಿಗಳು..

ಕೊಳ್ಳೇಗಾಲ: ಹುಲಿಗಳು ಭಾರತದ ಹೆಮ್ಮೆಯ ಪ್ರತೀಕ. ರಾಷ್ಟ್ರ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಲಿ ಹಲವು ವರ್ಷಗಳ ಹಿಂದೆ ಅಪಾಯದಂಚಿನ ಹಂತದಲ್ಲಿತ್ತು. ಈ ಹುಲಿಗಳ ಸಂರಕ್ಷಣೆಗೆ ಭಾರತದಲ್ಲಿ ತೆಗೆದುಕೊಂಡ ಸೂಕ್ತ ಕ್ರಮಗಳ ಪರಿಣಾಮ ಅವುಗಳ ಸಂಖ್ಯೆ ಸುಧಾರಿಸಿದ್ದು, ಇಂದು ವಿಶ್ವದ ಶೇ. 75ಕ್ಕಿಂತ ಅಧಿಕ ಹುಲಿಗಳನ್ನು ನಾವು ಭಾರತದಲ್ಲಿ ಕಾಣಬಹುದಾಗಿದೆ.

ಚಿತ್ರ ಕೃಪೆ- ವೇಣುಗೋಪಾಲ್, ಅಂಜನಾ ಸುಜಯಕಾಂತ್

ಹುಲಿಯ ದೇಹ ಕಂದು ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು, ಪ್ರತಿಯೊಂದು ಹುಲಿಗಳು ವಿಭಿನ್ನ ಶೈಲಿಯ ಕಪ್ಪು ಪಟ್ಟಿಗಳನ್ನು ಹೊಂದಿರುತ್ತವೆ. ಇಂದಿಗೂ ಸಹ ಆ ಪಟ್ಟಿಗಳ ಆಧಾರದ ಮೇಲೆ ಪ್ರತೀ ನಾಲ್ಕು ವರ್ಷಕ್ಕೂಮ್ಮೆ ಹುಲಿ ಗಣತಿ ಮಾಡಲಾಗುತ್ತಿದೆ. ಗತ್ತು, ಗಾಂಭೀರ್ಯಕ್ಕೆ ಹೆಸರಾದ ಪ್ರಾಣಿ ಹುಲಿಯಾಗಿದ್ದು, ಅದಕ್ಕೇ ಬಹುಶಃ ‌ಎಲ್ಲರಿಗೂ ಇಷ್ಟವಾಗುವ ಪ್ರಾಣಿಯಾಗಿದೆ.

ಚಿತ್ರ ಕೃಪೆ- ವೇಣುಗೋಪಾಲ್, ಅಂಜನಾ ಸುಜಯಕಾಂತ್

ಹೌದು, ಕರ್ನಾಟಕದಲ್ಲಿ ಸದ್ಯ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಭಧ್ರ , ದಾಂಡೇಲಿಯಂತಹ ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ವನ್ಯಜೀವಿ ಧಾಮವೂ ಹುಲಿ ಸಂರಕ್ಷಿತ ಪ್ರದೇಶವಾಗುತ್ತದೆ. ಪ್ರಸ್ತುತ ಚಾಮರಾಜನಗರ ಜಿಲ್ಲೆಯಲ್ಲೇ 3 ಹುಲಿ ಸಂರಕ್ಷಿತ ಪ್ರದೇಶಗಳಿರುವುದು ಹೆಮ್ಮೆಯ ವಿಚಾರವಾದರೆ, ಇದೀಗ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲೂ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದನ್ನು ಹುಲಿ ಸಂರಕ್ಷಣಾ ಪ್ರದೇಶ ಮಾಡಲು ನಿರ್ಧರಿಸಿವೆ. ಆದರೆ ಕೊರೊನಾದಿಂದ ಸದ್ಯ ಈ ಕಾರ್ಯಕ್ಕೆ ತಡೆಯಾಗಿದೆ.

ಚಿತ್ರ ಕೃಪೆ- ವೇಣುಗೋಪಾಲ್, ಅಂಜನಾ ಸುಜಯಕಾಂತ್

ಈ ಬಗ್ಗೆ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಆರ್​​​​​ಎಫ್​​ಒ ಏಳು ಕುಂಡಲು ಈಟಿವಿ ಭಾರತದೊಂದಿಗೆ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿ ಧಾಮವು 627 ಚ.ಕಿಲೋ ಮೀಟರ್​ ವ್ಯಾಪಿಯಿಂದ ಕೂಡಿದೆ. ಪಾಲರ್, ರಾಮಪುರ, ಮಹದೇಶ್ವರ ಬೆಟ್ಟ, ಹೂಗ್ಯಂ, ಹನೂರು, ಪಿ.ಜಿ.ಪಾಳ್ಯ ಅರಣ್ಯ ಪ್ರದೇಶದ ವಲಯಗಳಾಗಿವೆ. ಅರಣ್ಯದಲ್ಲಿ ಸುರಕ್ಷತೆ ಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದಂತೆ ಪ್ರಾಣಿಗಳು ಜೀವಿಸಲು ಅನುಕೂಲವಾಗುತ್ತಿದೆ. ಕಾಡೆಮ್ಮೆ, ಜಿಂಕೆ, ಸಂಬಾರ್​ಗಳ ಸಂಖ್ಯೆ ಹೆಚ್ಚಿರುವುದರಿಂದ ಹುಲಿಯ ಸಂತತಿ‌ ಹೆಚ್ಚಾಗುತ್ತಿದೆ. ಪ್ರಾಣಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಇದ್ದರೆ ಬೇರೆ ಕಡೆ ಹೋಗುವುದನ್ನು ನಿಂತ್ರಿಸಬಹುದು. ಆ್ಯಂಟಿ ಪೌಚಿಂಗ್ ಕ್ಯಾಂಪ್ ಮಾಡಿರುವುದರಿಂದ ಕಾಡು ಪ್ರಾಣಿಗಳ ಬೇಟೆಗೆ ಅವಕಾಶವಿರುವುದಿಲ್ಲ.

ಆರ್​​​​​ಎಫ್​​ಒ ಏಳು ಕುಂಡಲು ಮಾತು

ಈ ಹಿಂದೆ ಇಲ್ಲಿ ಬರೀ 6-7 ಹುಲಿಗಳು ಮಾತ್ರ ಇದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಹುಲಿಯ ಸಂತತಿ 20ಕ್ಕೂ ಅಧಿಕವಾಗಿದೆ. ಸದ್ಯ ಒಟ್ಟು 27 ಹುಲಿಗಳು ವಾಸವಾಗಿವೆ. ಮರಿಗಳನ್ನು ಸಹ ಕಾಣಬಹುದಾಗಿದೆ. ಕೊರೊನಾ ಬಾರದಿದ್ದರೆ ಮಲೆ ಮಹದೇಶ್ವರ ವನ್ಯಜೀವಿ ಧಾಮವು ಹುಲಿ ಸಂರಕ್ಷಿತ ಪ್ರದೇಶವಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ಬಂದಿದೆ. ಮುಂದಿನ ದಿನಗಳಲ್ಲಿ ಈ ಕೆಲಸವಾಗುತ್ತದೆ‌. ಇನ್ನೂ 7-8 ವರ್ಷಗಳಲ್ಲಿ ಬಂಡೀಪುರ, ನಾಗರಹೊಳೆಯಂತೆ ಮಲೆ ಮಹದೇಶ್ವರ ವನ್ಯಜೀವಿ ಧಾಮ ಕೂಡ ಹುಲಿ ಸಂರಕ್ಷಿತ ಅಭಯಾರಣ್ಯವಾಗಿ ಹೊರ ಹೊಮ್ಮುತ್ತದೆ ಎಂದು ತಿಳಿಸಿದರು.

ಕೆರೆಗಳ‌ ನಿರ್ಮಾಣ, ಸೋಲರ್ ಅಳವಡಿಕೆ: ಈ ವ್ತಾಪ್ತಿಯಲ್ಲಿ‌ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ.‌ ಮಾನ್ಸೂನ್ ಮತ್ತು ಮಳೆಗಾಲದ ಸಮಯದಲ್ಲಿ‌ ನೀರು ಹಳ್ಳ-ಕೊಳ್ಳದಲ್ಲಿ ಶೇಖರಣೆಯಾಗುತ್ತದೆ.‌ ಬೇಸಿಗೆ‌ ಬರುತ್ತಿದ್ದಂತೆ ಬತ್ತಿ ಹೋಗುತ್ತದೆ. ಇದು ಪ್ರಾಣಿಗಳಿಗೆ‌ ಸಮಸ್ಯೆಯಾಗುತ್ತದೆ. ಹಾಗಾಗಿ ಕಾಡಿನಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಸೋಲರ್ ವ್ಯವಸ್ಥೆಯೂ‌ ಇದೆ. ಎಲ್ಲಾ ಕಾಲದಲ್ಲೂ ನೀರು ಸಿಗುತ್ತಿರುವುದರಿಂದ ಪ್ರಾಣಿಗಳು ಪಲಾಯನ ಮಾಡದೆ ಸ್ವಚ್ಛಂದವಾಗಿ ವಿವರಿಸುತ್ತವೆ. ಇದು ಹುಲಿಗಳಿಗೆ ಸಹಕಾರಿಯಾಗುತ್ತದೆ.

ಗಿರಿ ಜನರಿಗೆ ಯಾವುದೇ ತೊಂದರೆ ಇಲ್ಲ: ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ ಗಿರಿ ಜನರಿಗೆ ಮತ್ತು ಕಾಂಡಂಚಿನ ಗ್ರಾಮಗಳಿಗೆ ತೊಂದರೆಯಾಗುತ್ತದೆ ಎಂಬ ಪ್ರಚಾರವಿದೆ. ಇದು ಸುಳ್ಳು. ಜನರಿಗೆ ಬರಬೇಕಾದ ಸೌಲಭ್ಯ ಸರಿಯಾಗಿ ತಲುಪುತ್ತದೆ. ಯಾರಿಗೂ ತೊಂದರೆಯಾಗುವುದಿಲ್ಲ. ಇಂತಹ ಮಾತುಗಳಿಗೆ ಜನರು ಕಿವಿ ಕೊಡಬಾರದು. ಜೀವ ಸಂಕುಲವಾದ ಪ್ರಾಣಿಗಳ ಉಳಿವಿಗಾಗಿ ಈ ಕಾರ್ಯವಷ್ಟೇ ಎಂದು ಏಳು ಕುಂಡಲು ಹೇಳಿದರು.

ರಾಜ್ಯದಲ್ಲಿ ಚಾಮರಾಜನಗರದಲ್ಲೇ ಹೆಚ್ಚು ಹುಲಿ... ಗಿರಿ ಜನರ ದೊಡ್ಡರಾಯ ಜಿಲ್ಲೆಗೆ ಕಳಶಪ್ರಾಯ: ನಗರದ ಮಾದಪ್ಪನ ವಾಹನವೆಂತಲೂ ಹೇಳುವ ಹುಲಿರಾಯನನ್ನು ಗಿರಿಜನರು ದೊಡ್ಡರಾಯ ಎಂತಲೇ ಕರೆಯುತ್ತಾರೆ. ಚಾಮರಾಜನಗರಕ್ಕಂತೂ ವ್ಯಾಘ್ರ ಕಳಶಪ್ರಾಯನಾಗಿದ್ದಾನೆ. ಕರ್ನಾಟಕದಲ್ಲಷ್ಟೇ ಅಲ್ಲದೆ ದಕ್ಷಿಣ ಭಾರತದ ಅತಿ ದೊಡ್ಡ ಮತ್ತು ಮೊದಲ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಅಲ್ಲದೆ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ಕೀರ್ತಿಗೆ ಚಾಮರಾಜನಗರ ಪಾತ್ರವಾಗಿದೆ.

ಈಟಿವಿ ಭಾರತಕ್ಕೆ ಉನ್ನತ ಮೂಲಗಳ ಮಾಹಿತಿ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 173, ಬಿಆರ್​ಟಿಯಲ್ಲಿ ( ಕಾವೇರಿ, ಮಲೆ ಮಹದೇಶ್ವರ ವನ್ಯಜೀವಿ ಧಾಮ ಸೇರಿದಂತೆ) 86 ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಉಳಿದಂತೆ ನಾಗರಹೊಳೆಯಲ್ಲಿ 163, ಭದ್ರಾದಲ್ಲಿ 38, ಅಣಶಿಯಲ್ಲಿ 11 ಹುಲಿಗಳಿರುವುದು ಪತ್ತೆಯಾಗಿದೆ.

ಸುಧಾರಣೆಯತ್ತ ಹುಲಿ ಸಂತತಿ..

ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಎರಡು ವನ್ಯಜೀವಿ ಧಾಮಗಳಿದ್ದು, ಮಲೆ ಮಹದೇಶ್ವರ ವನ್ಯಜೀವಿ ಧಾಮವೂ ಹುಲಿ ಸಂರಕ್ಷಿತ ಪ್ರದೇಶವಾಗುವ ಕಾಲ ಸನ್ನಿಹಿತದಲ್ಲಿದೆ. ಉಳಿದಂತೆ ಬಂಡೀಪುರದ 173 ಹಾಗೂ ಬಿಆರ್​​​ಟಿಯ 86 ಹುಲಿಗಳ ಸಂಖ್ಯೆ ಒಟ್ಟು ಸೇರಿಸಿ 259 ಹುಲಿಗಳಾಗಿದ್ದು, ರಾಜ್ಯದಲ್ಲಿನ ಅರ್ಧದಷ್ಟು ಹುಲಿಗಳು ಜಿಲ್ಲೆಯಲ್ಲೇ ಇರುವುದು ಚಾಮರಾಜನಗರದ ಹೆಮ್ಮೆಯಾಗಿದೆ.

ಅರಣ್ಯ ಇಲಾಖೆಯು ಹುಲಿಗಳ ಅಂದಾಜಿನ ಲೆಕ್ಕವನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ‌.

ABOUT THE AUTHOR

...view details