ಕರ್ನಾಟಕ

karnataka

By

Published : Dec 27, 2021, 8:00 PM IST

ETV Bharat / state

ಮದುವೆ ಆಗುವಂತೆ ಬೆನ್ನುಬಿದ್ದ ಮಹಿಳೆ: ಯುವಕ ಒಪ್ಪದಿದ್ದಾಗ ಕೆರಳಿದ ನಾರಿ.. ಮನೆ, ಆಟೋಗೆ ಇಟ್ಲು ಬೆಂಕಿ!

ಪರಿಚಯಸ್ಥನ ಬೆನ್ನುಬಿದ್ದ ಮಹಿಳೆಯೋರ್ವಳು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆತ ವಿವಾಹಕ್ಕೆ ನಿರಾಕರಿಸಿದ್ದಕ್ಕೆ ಕೆರಳಿದ ನಾರಿಯು ಯುವಕನ ಮನೆ ಮತ್ತು ಆಟೋಗೆ ಬೆಂಕಿ ಇಟ್ಟಿರುವ ಆರೋಪ ಪ್ರಕರಣ ಬೀದರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮನೆ ಮತ್ತು ಆಟೋಗೆ ಬೆಂಕಿ ಇಟ್ಟ ಮಹಿಳೆ
ಮನೆ ಮತ್ತು ಆಟೋಗೆ ಬೆಂಕಿ ಇಟ್ಟ ಮಹಿಳೆ

ಬಸವಕಲ್ಯಾಣ(ಬೀದರ್​): ಮದುವೆಯಾಗಲು ಒಪ್ಪದ ಯುವಕನ ಮನೆ ಹಾಗೂ ಆತನ ಆಟೋಗೆ ಕೆರಳಿದ ಮಹಿಳೆಯೊಬ್ಬಳು ಬೆಂಕಿ ಹಚ್ಚಿ ಸುಟ್ಟಿರುವ ವಿಚಿತ್ರ ಆರೋಪ ಪ್ರಕರಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಗ್ ಹಿಪ್ಪರಗಾ ಗ್ರಾಮದ ನಿವಾಸಿ ಭೀಮರಾವ್​​ ಎನ್ನುವಾತನ ಮನೆ ಹಾಗೂ ಆತನ ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಸುಮಾ ಎನ್ನುವ ಮಹಿಳೆ ಬೆಂಕಿ ಹಚ್ಚಿ ಸುಟ್ಟಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.

ಮೂಲತಃ ಚಿಕನಾಗಾಂವ್​ ಗ್ರಾಮದ ನಿವಾಸಿಯಾದ ಭೀಮರಾವ್​​​ ಕೆಲ ದಿನಗಳ ಹಿಂದೆ ಸಸ್ತಾಪೂರ ಗ್ರಾಮದ ಸಮೀಪ ಆಡವಿಯಲ್ಲಿ ತನ್ನ ಕುಟುಂಬ ಸಹಿತ ಮನೆ ಮಾಡಿ ವಾಸವಿದ್ದ. ಈ ವೇಳೆ ಸುಮಾ ಎನ್ನುವ ಮಹಿಳೆ ಆತನಿಗೆ ಪರಿಚಯವಾಗಿದ್ದಾಳೆ. ನಂತರ ಮದುವೆ ಮಾಡಿಕೊಳ್ಳುವಂತೆ ಸುಮಾ ಭೀಮರಾವ್​​​ಗೆ ಬೆನ್ನುಬಿದ್ದಿದ್ದಾಳೆ. ಸುಮಾಳ ಕಾಟ ತಾಳದೆ ಕುಟುಂಬ ಸಹಿತ ತನ್ನ ತಾಯಿ ತವರು ಮನೆಯಾಗಿರುವ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ಮನೆ ಮಾಡಿ ಉಳಿದುಕೊಂಡಿದ್ದಾನೆ.

ಈ ಸುದ್ದಿ ತಿಳಿದ ಸುಮಾ ಕಳೆದ ಡಿ. 13 ರಂದು ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳುಬೇಕು. ಇಲ್ಲವಾದರೆ ನಾನು ಕೊಟ್ಟ 4 ಲಕ್ಷ ರೂ. ಹಣ ಹಿಂದಿರುಗಿಸಬೇಕು ಎಂದು ಮತ್ತೆ ಕಿರಿಕಿರಿ ಮಾಡಿದ್ದಾಳೆ. ಇದಕ್ಕೆ ಒಪ್ಪದಿದ್ದಾಗ ಡಿ. 23ರಂದು ರಾತ್ರಿ ಮತ್ತೆ ಗ್ರಾಮಕ್ಕೆ ತೆರಳಿ ಭೀಮರಾವ್​​ ಅವರ ಮನೆ ಹಾಗೂ ಮನೆ ಮುಂದೆ ನಿಲ್ಲಿಸಿದ ಆಟೋಗೆ ಬೆಂಕಿ ಹಚ್ಚಿದ್ದಾಳೆ ಎನ್ನಲಾಗ್ತಿದೆ.

ಸುಮಾಳ ಜೊತೆಗೆ ಇನ್ನಿಬ್ಬರು ವ್ಯಕ್ತಿಗಳು ಬಂದು ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಎಂದು ಭೀಮರಾವನ ತಾಯಿ ನಾಗಮ್ಮ ಮುಡಬಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಡಬಿ ಠಾಣೆ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

For All Latest Updates

ABOUT THE AUTHOR

...view details