ಬಸವಕಲ್ಯಾಣ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಚೇರಿ ಕಟ್ಟಡದ ಮುಂದಿನ ಛಾವಣಿ ಕುಸಿದು ಬಾಲಕನೋರ್ವ ಮೃತಪಟ್ಟು, 3 ಮಕ್ಕಳಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಡೆದಿದೆ.
ಪಿಕೆಪಿಎಸ್ ಕಟ್ಟಡದ ಛಾವಣಿ ಕುಸಿದು ಬಾಲಕ ಸಾವು; ಮೂವರಿಗೆ ಗಂಭೀರ ಗಾಯ - ಕಟ್ಟಡ ಕುಸಿತ ಸುದ್ದಿ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಕಟ್ಟಡದ ಛಾವಣಿ ಕುಸಿದು ಬಿದ್ದು, ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಜರುಗಿದೆ.

ಪ್ರಜ್ವಲ ಶ್ರೀನಾಥ್ ಜಾಧವ (11) ಮೃತ ಬಾಲಕ. ದಿನೇಶ್ ಭೀಮಣ್ಣ (12), ಆಕಾಶ ಭೀಮಣ್ಣ (10), ಚರಣ ತಾನಾಜಿ (10) ಗಾಯಗೊಂಡ ಮಕ್ಕಳು. ಗ್ರಾಮದ ಮಹಾದೇವ ಮಂದಿರ ಸಮೀಪ ಇರುವ ಪಿಕೆಪಿಎಸ್ ಕಟ್ಟಡದ ಮುಭಾಗದಲ್ಲಿರುವ ಮೇಲ್ಛಾವಣಿ ದಿಢೀರನೆ ಕುಸಿದು ಬಿದ್ದಿದೆ. ಕಟ್ಟಡದ ಕೆಳಗೆ ಆಟವಾಡುತ್ತ ಕುಳಿತಿದ್ದ ನಾಲ್ವರು ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು, ಇದರಲ್ಲಿ ಚರಣ ಎನ್ನುವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಬಾಲಕರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು ನಲವತ್ತು ವರ್ಷಗಳಷ್ಟು ಹಳೆಯ ಕಟ್ಟಡವಾಗಿರುವ ಕಾರಣ ಮಳೆಯಿಂದ ನೆನೆದು ಛಾವಣಿ ಕುಸಿದಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್ಐ ಜಯಶ್ರೀ ಭೇಟಿ ನೀಡಿ ಪರಿಶೀಲಿಸಿದ್ದಾರೆ.