ಬೀದರ್:ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಚಾಲನೆ ನೀಡಿದರು.
ಭಾಲ್ಕಿ ಪಟ್ಟಣದಲ್ಲಿ ಔಷಧ ಸಿಂಪಡಣೆಗೆ ಈಶ್ವರ್ ಖಂಡ್ರೆ ಚಾಲನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಕಲಾದ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಖುದ್ದು ಈಶ್ವರ್ ಖಂಡ್ರೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಪಟ್ಟಣದ ಪ್ರತಿಯೊಂದು ಬಡಾವಣೆ ಸೇರಿದಂತೆ ಜನರು ಸೇರುವಂತಹ ಸ್ಥಳಗಳಲ್ಲಿ ಸೂಕ್ಷ್ಮವಾಗಿ ಔಷಧ ಸಿಂಪಡಣೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೇ ಮಹಾರಾಷ್ಟ್ರ ಗಡಿಯಲ್ಲಿರುವ ಅಟ್ಟರಗಾ ಚೆಕ್ ಪೋಸ್ಟ್ಗೆ ದಿಢೀರ್ ಭೇಟಿ ನೀಡಿ ನೆರೆ ರಾಜ್ಯದಿಂದ ಯಾರೇ ಬಂದಿದ್ದರೂ ಕೂಡ ರಾಜ್ಯಕ್ಕೆ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಲಾಕ್ಡೌನ್ ಇನ್ನಷ್ಟು ಕಠಿಣವಾಗಲಿದ್ದು, ಮೇ 3ರವರೆಗೆ ಸಾರ್ವಜನಿಕರು ಸುರಕ್ಷಿತವಾಗಿ ಮನೆಯಲ್ಲೇ ಇರಬೇಕು. ಅನಗತ್ಯವಾಗಿ ರಸ್ತೆಗೆ ಬಂದ್ರೆ ಅಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದರು.