ಬೀದರ್: ಕೊರೊನಾ ವೈರಸ್ ಸೋಂಕು ಒಂದೇ ದಿನದಲ್ಲಿ 11 ಜನರಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಚ್ಚಿ ಬಿದ್ದ ಬೀದರ್ ಜನರು ಈಗ ನಿರಾಳರಾಗಿದ್ದಾರೆ. ಉಳಿದ 16 ಜನರ ವರದಿ ನೆಗೆಟಿವ್ ಆಗಿದ್ದು, ಬೀದರ್ ಸೇಫ್ ಆಗಿದೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್. ಆರ್ ಮಹದೇವ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಜಮಾತ್ನಲ್ಲಿ ಪಾಲ್ಗೊಂಡು ಬೀದರ್ಗೆ ವಾಪಸ್ಸಾದ ಒಟ್ಟು 27 ಜನರ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ 10 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೆ ಇನ್ನೊಬ್ಬರ ಪರೀಕ್ಷೆ ಮತ್ತೊಮ್ಮೆ ಮಾಡಲಾಗುತ್ತಿದ್ದು, ಅದನ್ನು ನಾವು ಪಾಸಿಟಿವ್ ಎಂದೇ ಪರಿಗಣಿಸಿದ್ದೇವೆ. ಉಳಿದ 16 ಜನರ ವರದಿ ನೆಗೆಟಿವ್ ಆಗಿದ್ದು, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಅಲ್ಲದೆ ಬೀದರ್ನ ಓಲ್ಡ್ ಸಿಟಿ, ಬಸವಕಲ್ಯಾಣ ಹಾಗೂ ಮನ್ನಾಖೇಳ್ಳಿಯನ್ನು ಹೈಅಲರ್ಟ್ ಏರಿಯಾ ಎಂದು ಘೋಷಣೆ ಮಾಡಿದ ನಂತರ 40 ತಂಡಗಳನ್ನು ರಚನೆ ಮಾಡಿ ಪರಿಶಿಲನೆ ಮಾಡಲಾಗಿದೆ. ತನಿಖೆ ವೇಳೆಯಲ್ಲಿ ಜಮಾತ್ನಿಂದ ಬೀದರ್ಗೆ ಬಂದವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಅವರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇದ್ದರು. ಯಾರೂ ರಸ್ತೆಗೆ ಬಂದು ಸುತ್ತಾಡುವುದಾಗಲಿ, ಹೆಚ್ಚು ಜನರನ್ನು ಸಂಪರ್ಕಿಸುವುದಾಗಲಿ ಮಾಡಿಲ್ಲ. ಅಲ್ಲದೆ ಸೊಂಕಿತರ 82 ಜನ ಸಂಪರ್ಕಿತರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಹೀಗಾಗಿ ಬೀದರ್ ಸೇಫ್ ಇದೆ ಎಂದು ಹೇಳಬಹುದು ಎಂದರು.
ಈ ಮೂರು ಪ್ರದೇಶಗಳಲ್ಲಿ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಸರಬರಾಜು ಮಾಡುತ್ತಿದ್ದು, ಯಾರೊಬ್ಬರೂ ರಸ್ತೆಗೆ ಬರುವಂತಿಲ್ಲ. ಮುಂದಿನ 14 ದಿನಗಳ ಕಾಲ ಈ ಮೂರು ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.