ಬೀದರ್:12ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಕ್ರಾಂತಿ ಮಾಡಿದ ಮೂಲ ಸ್ಥಳ ಬೀದರ್. ವಿಶ್ವದ ಪ್ರಥಮ ಸಂಸತ್ ಬಸವಕಲ್ಯಾಣದ ಅನುಭವ ಮಂಟಪ ಇಲ್ಲಿದೆ. ಜೊತೆಗೆ ಬಸವೇಶ್ವರರ ವಿಚಾರಧಾರೆ ಬೀಜಾಂಕುರವಾಗಿದ್ದು ಈ ಜಿಲ್ಲೆಯಲ್ಲಿ. ಇಂತಹ ಪ್ರಸಿದ್ಧ ಬೀದರ್ ಜಿಲ್ಲೆಯಲ್ಲಿ ಎಲ್ಲ ಭಾಷಿಕರು ಪ್ರೀತಿ ವಿಶ್ವಾಸದಿಂದ ಇರುವುದು ಭಾಷಾ ಸಾಮರಸ್ಯದ ಸಂಕೇತವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶಂಸಿದರು.
ಜಿಲ್ಲೆಯಲ್ಲಿ ನಡೆದ ಬೀದರ್ ಉತ್ಸವ-2023ರ ನಿಮಿತ್ತ ಬೀದರ್ ಕೋಟೆ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮನ್ನೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೋಡಿ ಬಹಳ ಸಂತೋಷವಾಗಿದೆ. ಕಳೆದ ಒಂದು ವಾರದಿಂದ ಬೀದರ್ ಜಿಲ್ಲೆಯ ಸಂಸ್ಕೃತಿ, ಕಲೆ, ಸಾಹಿತ್ಯ, ಕೃಷಿ ಎಲ್ಲಾ ಪ್ರದರ್ಶನಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದೀರಿ. ನಿಮಗೆ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ರಾಜ್ಯದ ಮುಕಟ ಪ್ರಾಯವಾಗಿರುವ ಬೀದರ್ ಜಿಲ್ಲೆಯು ಐತಿಹಾಸಿಕವಾಗಿ ಪ್ರಸಿದ್ದವಾಗಿದೆ. ಇಲ್ಲಿನ ಸಂಸ್ಕೃತಿ, ನಾಡು ನುಡಿ ಎಲ್ಲವೂ ವಿಶಿಷ್ಟವಾಗಿದೆ ಇದೇ ವೇಳೆ ಹೇಳಿದರು. ಈ ಎಲ್ಲಾ ಪರಂಪರೆಯನ್ನು ಹಿರಿಯ ಮಠಾಧೀಶರು, ಸಾಹಿತಿಗಳು, ಜನನಾಯಕರು ಕಾಪಾಡಿಕೊಂಡು ಬಂದಿದ್ದಾರೆ. ನಾಗರೀಕತೆಗೂ ಮತ್ತು ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದ್ದು, ವಿಶೇಷವಾಗಿ ನಮ್ಮ ಮೂಲ ನಾಗರೀಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.
ಬೀದರ್ ಉತ್ಸವ ಆರೇಳು ವರ್ಷಗಳ ನಂತರ ನಡೆಯುತ್ತಿರುವುದರಿಂದ ತಾವೆಲ್ಲರೂ ಆತ್ಮವಿಶ್ವಾಸದಿಂದ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿರುತ್ತಿರಿ. ನಮ್ಮ ಇತಿಹಾಸ, ಪರಂಪರೆ ಉಳಿಸಿಕೊಂಡು ಹೋಗುವಂತಹ ಕೆಲಸ ಈ ಉತ್ಸವದಿಂದ ಮತ್ತೊಮ್ಮೆ ಸ್ಥಾಪನೆಯಾಗಿದೆ. ಈ ಮೂಲಕ ನಾವೆಲ್ಲರೂ ಒಂದೇ ಎನ್ನುವ ಭಾವನೆ ಈ ಉತ್ಸವದಿಂದ ಮೂಡಿದೆ. ಜಿಲ್ಲೆಯ ಕಲಾವಿದರಿಗೆ ಉತ್ಸವ ಬಹಳ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದೆಯಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಖ್ಯಾತ ಕಲಾವಿದರು, ಸಿನಿಮಾ ರಂಗದ ಕಲಾವಿದರು ಭಾಗವಹಿಸುವುದು ಸಂತೋಷ ತಂದಿದೆ ಎಂದರು.