ಕರ್ನಾಟಕ

karnataka

ETV Bharat / state

ಸೋಯಾಬಿನ್‌ ಬಿತ್ತನೆ ಬೀಜ ದಾಸ್ತಾನಿದ್ರೂ ವಿತರಿಸದ ಆರೋಪ: ಬೀದರ್‌ ಜಿಲ್ಲೆ ಅನ್ನದಾತರು ಕಂಗಾಲು

ಸಕಾಲಕ್ಕೆ ಮುಂಗಾರು ಮಳೆಯಾಗಿದೆ. ಲಾಕ್‌ಡೌನ್ ವೇಳೆ ಭೂಮಿಯನ್ನು ಹಸನಾಗಿ ಹದ ಮಾಡಿದ್ದಾರೆ. ರಸಗೊಬ್ಬರ ತಂದು ಮನೆಯಲ್ಲಿಟ್ಟಿದ್ದಾರೆ. ಆದ್ರೆ ಬೀಜ ಸಂಗ್ರಹದ ಸರ್ಕಾರಿ ಗೋದಾಮಿನಲ್ಲಿ ಸಾಕಷ್ಟು ದಾಸ್ತಾನು ಇದ್ರೂ ರೈತರಿಗೆ ವಿತರಣೆ ಮಾಡ್ತಿಲ್ಲವಂತೆ. ಇದರಿಂದ ಅಸಹಾಯಕರಾದ ಬೀದರ್‌ ಜಿಲ್ಲೆಯ ಅನ್ನದಾತರು ಬಿತ್ತನೆ ಮಾಡಲಾಗದೆ ಕಂಗಾಲಾಗಿದ್ದಾರೆ.

By

Published : Jun 18, 2020, 8:20 PM IST

bidar-farmers-facing-soybean-seeds-problem
ಸೋಯಾಬಿನ್‌ ಬಿತ್ತನೆ ಬೀಜ ದಾಸ್ತಾನಿದ್ರೂ ವಿತರಿಸುತ್ತಿಲ್ಲ; ಬೀದರ್‌ ಜಿಲ್ಲೆ ಅನ್ನದಾತರು ಕಂಗಾಲು

ಔರಾದ್‌(ಬೀದರ್)‌: ಜಿಲ್ಲೆಯ ಔರಾದ್ ಪಟ್ಟಣ ಸೇರಿದಂತೆ ವಿವಿಧೆಡೆ ವಾಣಿಜ್ಯ ಬೆಳೆಯಾದ ಸೋಯಾಬಿನ್ ಬೆಳೆಯಲಾಗುತ್ತದೆ. ಬೀಜ ವಿತರಣೆಯಲ್ಲಿ ಕೃಷಿ ಇಲಾಖೆ ಮಾಡಿಕೊಂಡ ಗೊಂದಲದಿಂದ ರೈತರು ಮುಂಗಾರು ಹಂಗಾಮಿನ ಬಿತ್ತನೆ ಮಾಡಲಾಗದೆ ಕಂಗಾಲಾಗಿದ್ದಾರೆ. ಬೀಜಕ್ಕಾಗಿ ಅಲೆದಾಡುತ್ತಿದ್ದರೂ ಯಾವೊಬ್ಬ ಸಂಬಂಧಪಟ್ಟ ಅಧಿಕಾರಿಗಳು ಇವರತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸೋಯಾಬಿನ್‌ ಬಿತ್ತನೆ ಬೀಜ ದಾಸ್ತಾನಿದ್ರೂ ವಿತರಿಸದ ಆರೋಪ; ಬೀದರ್‌ ಜಿಲ್ಲೆ ಅನ್ನದಾತರು ಕಂಗಾಲು

ಮಧ್ಯಪ್ರದೇಶ ಹಾಗೂ ತೆಲಂಗಾಣದಿಂದ ಸರಬರಾಜಾಗುವ ಸೋಯಾಬಿನ್ ಬೀಜ ಮೊಳಕೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿ ರೈತರಿಗೆ 2 ವಾರಗಳಿಂದ ಬೀಜ ನೀಡುತ್ತಿಲ್ಲ. ಸಾಕಷ್ಟು ದಾಸ್ತಾನು ಇದೆ. ಹೀಗಾಗಿ ನಮಗೆ ಬೀಜ ನೀಡಿ, ಅದನ್ನೇ ಬಿತ್ತನೆ ಮಾಡುತ್ತೇವೆ. ಮೊಳಕೆ ಒಡೆಯುತ್ತೋ ಬಿಡುತ್ತೋ ನಮ್ಮ ಕರ್ಮ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೆಲವೊಂದು ಹಳ್ಳಿಗಳಲ್ಲಿ ಈಗಾಗಲೇ ಸೋಯಾಬಿನ್ ಬೀಜ ವಿತರಣೆ ಮಾಡಲಾಗಿದೆ. ಕೆಲ ರೈತರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಚೆನ್ನಾಗಿ ಮೊಳಕೆ ಒಡೆದಿವೆ. ಬೀಜಗಳಲ್ಲಿ ಯಾವುದೇ ತೊಂದರೆ ಇಲ್ಲ. ಆದ್ರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಬೀಜ ವಿತರಣೆ ಮಾಡಬೇಡಿ ಎಂದು ಹೇಳಿದ್ದಾರೆ. ಅವರು ವಿತರಣೆ ಮಾಡಿ ಎಂದು ಆದೇಶ ನೀಡಿದ್ರೆ ಮಾತ್ರ ಬೀಜ ವಿತರಣೆ ಮಾಡುತ್ತೇವೆ ಅಂತಾರೆ ಕೃಷಿ ಅಧಿಕಾರಿ ಭೀಮರಾವ್ ಶಿಂಧೆ.

ಒಟ್ಟಾರೆ ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಅನ್ನುವಂತಾಗಿದೆ ಬೀದರ್‌ ರೈತರ ಪರಿಸ್ಥಿತಿ. ಸರ್ಕಾರ ಸಬ್ಸಿಡಿ ದರದಲ್ಲಿ ಸೋಯಾಬಿನ್ ಬೀಜ ವಿತರಣೆಗೆ ಅವಕಾಶ ನೀಡಿದರೂ ಕೃಷಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.

ABOUT THE AUTHOR

...view details